‘ಭೂಮಿಯನ್ನು ಬಗೆದಾಗ ಮ್ಯಾಂಗನೀಸ್ ಅದಿರಿನ ಗಣಿ ಸಿಕ್ಕಿತು. ಇಷ್ಟು ಸಿಕ್ಕರೆ ಕೇಳಬೇಕಾ, ಅದಿರು ಅಗೆಯುವ ಕಾಯಕ ಎಗ್ಗಿಲ್ಲದೇ ನಡೆಯಿತು. ಅದಿರು ತುಂಬಿದ ಲಾರಿಗಳು ದೂಳು ಹಾರಿಸುತ್ತ ಹೋಗುತ್ತಿದ್ದವು. ನಾಲ್ಕಾರು ಕಂಪೆನಿಗಳು ಬಂದು ಇಲ್ಲಿಯೇ ತಳವೂರಿ ಸ್ಥಳೀಯರಿಗೆ ಉದ್ಯೋಗದಾತರಾಗಿ ಬಡವರ ತುತ್ತಿನ ಚೀಲ ತುಂಬಿಸಿದವು. ಅವ್ಯಾಹತವಾಗಿ ನಡೆಯುತ್ತಿದ್ದ ಗಣಿ ಚಟುವಟಿಕೆಗೆ ಪೂರ್ಣವಿರಾಮ ಹಾಕಿದ್ದು 1986ರ ಅರಣ್ಯ ಸಂರಕ್ಷಣಾ ಕಾಯ್ದೆ. ಗಣಿಗಾರಿಕೆಯೇನೋ ನಿಂತಿತು ಆದರೆ ನಿರುದ್ಯೋಗದ ನಿರ್ವಾತ ಸೃಷ್ಟಿಯಾಗಿ ಪ್ಲೇಗ್ ಬಂದು ಜನರು ಊರು ಬಿಡುವಂತೆ ಊರಿಗೆ ಊರೇ ಕಿತ್ತೆದ್ದು ಗೋವಾದ ಕಬ್ಬಿನ ತೋಟ, ಗೇರು ನೆಡುತೋಪಿನ ಕೆಲಸಕ್ಕೆ ವಲಸೆ ಹೋಗಲು ಪ್ರಾರಂಭಿಸಿತು. 1990ರ ದಶಕದಲ್ಲಿ ಶುರುವಾದ ಗೋವಾ ವಲಸೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ’ ಎನ್ನುವಾಗ ಅವರ ಮಾತಿನಲ್ಲಿ ಅಸಹಾಯಕತೆಯ ನೋವಿತ್ತು.
‘ಆಗ ಈಗಿನಂತೆ ಭಾರೀ ಯಂತ್ರಗಳು ಬಂದು ಗುಡುಗಿನಂತೆ ಶಬ್ದ ಮಾಡಿ ನೆಲವನ್ನು ಸೀಳುತ್ತಿರಲಿಲ್ಲ. ಕೆಲಸಗಾರರು ಬೆವರು ಹರಿಸಿ ಗುದ್ದಲಿ, ಪಿಕಾಸಿನಲ್ಲಿ ಬಗೆದು ಅದಿರು ತೆಗೆಯುತ್ತಿದ್ದರು. ಅದಲ್ಲದೇ ಅದಿರು ಸಾಗಾಟಕ್ಕೆ ಬರುವ ವಾಹನಗಳಿಗೆ ಮಳೆಗಾಲದಲ್ಲಿ ಜೊಯಿಡಾದ ರಸ್ತೆಗಳು ಘೇರಾವ್ ಹಾಕಿ ವಾಪಸ್ ಕಳುಹಿಸಿದವು. ಹೀಗಾಗಿ ನಮ್ಮ ಪರಿಸರ ಬಳ್ಳಾರಿಯಂತೆ ಬೆಂಗಾಡಾಗಲಿಲ್ಲ’ ಎನ್ನುತ್ತ ಮುಗುಳ್ನಕ್ಕರು.
‘ತಂಗುಮನೆ’ಯ ಕನಸು
‘ಜೊಯಿಡಾದ ಅಸ್ತಿತ್ವ ಕಾಡಿನಲ್ಲಿ ಸಮ್ಮಿಳಿತಗೊಂಡಿದೆ. ಹಲವು ವನ್ಯಜೀವಿಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಹೆಗಲಮೇಲೇರಿಸಿಕೊಂಡಿರುವ ನಾವು ನಿಸರ್ಗದ ಜೊತೆಯಾಗಿ ಉದ್ಯೋಗ ಸೃಷ್ಟಿಸಲು ಯೋಚಿಸಿ ಉತ್ಸಾಹಿಗಳು ಸೇರಿ 2007ರಲ್ಲಿ ಕಾಳಿ ಪರಿಸರ ಪ್ರವಾಸೋದ್ಯಮ ಸಂಸ್ಥೆ ಸ್ಥಾಪಿಸಿದೆವು. ರೆಸಾರ್ಟ್ ರಂಗಿಲ್ಲದ, ಸಾಂಪ್ರದಾಯಿಕ ತಂಗುಮನೆ (ಹೋಮ್ ಸ್ಟೇ)ಯಲ್ಲಿ ಉದ್ಯೋಗಾವಕಾಶ ನೀಡಿ ವಲಸೆ ತಪ್ಪಿಸುವುದು ನಮ್ಮ ಉದ್ದೇಶವಾಗಿತ್ತು. ಒಂಬತ್ತು ವರ್ಷಗಳ ಹಿಂದೆ ಹುಟ್ಟಿರುವ ಸಂಸ್ಥೆ ಇಂದು ನೂರಾರು ಕುಟುಂಬಗಳಿಗೆ ಬದುಕು ಕೊಟ್ಟಿದೆ’ ಎನ್ನುತ್ತ ಅವರು ‘ಕಾಡುಮನೆ’ ಹೋಮ್ ಸ್ಟೇ ಮಾಲೀಕ ನರಸಿಂಹ ಛಾಪಖಂಡ ಅವರನ್ನು ಪರಿಚಯಿಸಿದರು.
ವಿಭಿನ್ನ ಪ್ರಯೋಗದೊಂದಿಗೆ ತಂಗುಮನೆ ನಡೆಸುತ್ತಿರುವ ನರಸಿಂಹ ತಮ್ಮ ಜಮೀನಿನಲ್ಲಿ ನಮ್ಮನ್ನು ಓಡಾಡಿಸುತ್ತ ಹೋಮ್ ಸ್ಟೇಗಳ ವಿಶೇಷತೆ ಬಿಡಿಸಿಟ್ಟರು. ‘ನಮ್ಮೂರಿನ ಪರಿಸರದಲ್ಲಿ ತಂಗುಮನೆಯ ಕಲ್ಪನೆಗೆ ಮೂರ್ತರೂಪ ಕೊಟ್ಟು ಹಳ್ಳಿ ಸೊಗಡಿನ ಊಟ, ತಿನಿಸುಗಳನ್ನು ಪರಿಚಯಿಸಿದೆವು. ಹೈಟೆಕ್ ನಗರಗಳ ಟೆಕಿಗಳು ಇದನ್ನು ಬಾಯಿ ಚಪ್ಪರಿಸಿ ಆಸ್ವಾದಿಸಿದರು. ಜೊಯಿಡಾದಲ್ಲಿ ಈಗ 30ಕ್ಕೂ ಅಧಿಕ ಹೋಮ್ ಸ್ಟೇಗಳಿವೆ. ಪ್ರತಿಯೊಂದೂ ಒಂದಕ್ಕಿಂತ ಇನ್ನೊಂದು ಭಿನ್ನವಾಗಿದೆ. ಒಬ್ಬರನ್ನು ಇನ್ನೊಬ್ಬರು ಅನುಕರಿಸಿ ಅಳವಡಿಸಿಕೊಳ್ಳುವಂತಿಲ್ಲ. ಇದು ನಮ್ಮ ಸಂಘದ ಅಲಿಖಿತ ಷರತ್ತು. ಚಾರಣಿಗರನ್ನು ಕರೆದು ಹೋಗುವ ಹೋಮ್ ಸ್ಟೇ ಮುಖ್ಯಸ್ಥರು, ಗೈಡ್ಗಳು ಅಡವಿಯ ನಿಯಮ ಪಾಲಿಸಬೇಕು. ಇದಕ್ಕೆ ತಪ್ಪಿದವರನ್ನು ಮುಲಾಜಿಲ್ಲದೇ ತರಾಟೆಗೆ ತೆಗೆದುಕೊಳ್ಳುತ್ತೇವೆ. ನಮಗೇ ನಾವೇ ಮೂಗುದಾರ ಹಾಕಿಕೊಳ್ಳುವ ಕ್ರಮವಿದು. ಜೊಯಿಡಾ ಕಾಡು ನೋಡಿ ಎಲ್ಲಾದರೂ ಪ್ಲಾಸ್ಟಿಕ್ ಸಿಕ್ಕರೆ ಹೇಳಿ ನೋಡೋಣ’ ಎಂದು ಅವರು ನಮಗೆ ಸವಾಲೆಸೆದರು.
‘ಪರಿಸರ ಪ್ರವಾಸೋದ್ಯಮ ಮೂಲ ನಿವಾಸಿಗಳಿಗೆ ನೇರ ಹಾಗೂ ಪರೋಕ್ಷವಾಗಿ ಬದುಕು ಕೊಟ್ಟಿದೆ. ಕುಣಬಿಗರು, ಮರಾಠಿಗರು ಬೆಳೆದ ಶುದ್ಧ ಸಾವಯವ ಅಕ್ಕಿ, ತರಕಾರಿ, 10–12 ಜಾತಿಯ ಗಡ್ಡೆಗೆಣಸುಗಳು ತಂಗುಮನೆ ಅಡುಗೆಯ ರುಚಿ ಹೆಚ್ಚಿಸಿವೆ. ಸ್ಥಳೀಯ ಹೈನುಗಾರರು ನೀಡುವ ಹಾಲು– ಮೊಸರು, ಪ್ಯಾಕೆಟ್ ಉತ್ಪನ್ನಗಳನ್ನು ಬದಿಗೆ ಸರಿಸಿದೆ. ಹೋಮ್ ಸ್ಟೇಗಳಲ್ಲಿ ಅಡುಗೆ ಸಹಾಯಕರು, ಪರಿಚಾರಕರೆಲ್ಲರೂ ಸ್ಥಳೀಯರೇ. ಮಹಿಳೆಯರು ಬಿಡುವಿನ ವೇಳೆಯಲ್ಲಿ ಹಪ್ಪಳ, ಅರಿಶಿಣ ಪುಡಿ, ಮಸಾಲೆ ಪುಡಿ, ಕಷಾಯ ಪುಡಿ, ವೈವಿಧ್ಯ ಉಪ್ಪಿನಕಾಯಿ, ಚಟ್ನಿಪುಡಿ ಸಿದ್ಧಪಡಿಸಿ ಹೋಮ್ ಸ್ಟೇಗಳಿಗೆ ಪೂರೈಕೆ ಮಾಡುತ್ತಾರೆ. ಹಸಿವಿದ್ದಷ್ಟು ಊಟ ಕೊಡಲಾಗುತ್ತಿಲ್ಲ ನಿಜ ಆದರೆ ಉದ್ಯೋಗದ ಬೇಡಿಕೆ ತಗ್ಗಿಸುವಲ್ಲಿ ಪರಿಸರ ಪ್ರವಾಸೋದ್ಯಮದ ಮುನ್ನುಡಿ ಬರೆದಿದೆ’ ಎನ್ನುತ್ತ ಅವರು ಅಪರೂಪದ ಕಳಲೆ ಉಪ್ಪಿನಕಾಯಿ ಸವಿಯಲು ಕೊಟ್ಟರು.
ಕುಣಬಿಗರ ಕಂದಮೂಲ ಕೃಷಿ: ಕಂದಮೂಲ ಕೃಷಿಯಲ್ಲಿ ಕುಣಬಿಗರು ಎತ್ತಿದ ಕೈ. ಅವರ ಕೈತೋಟದಲ್ಲಿ ಬೆಳೆದ 10–12 ಜಾತಿಯ ಕೆಸುವಿನ ಗಡ್ಡೆಗಳು ಹೋಮ್ ಸ್ಟೇಗಳ ಅಡುಗೆಮನೆ ಅಲಂಕರಿಸುತ್ತವೆ. ‘ನಾವು ಸಿದ್ಧಪಡಿಸುವ ಕೆಸುವಿನ ಫ್ರೈ, ಕುಣಬಿಗರ ಸಾಂಪ್ರದಾಯಿಕ ತಿನಿಸು ಬಾಕ್ರಿ, ಹಳ್ಳಿಮನೆಯ ನೀರು ದೋಸೆ, ಕೊಟ್ಟೆ ಇಡ್ಲಿ, ಕೆಸುವಿನ ಫ್ರೈ, ಅಕ್ಕಿವಡೆ, ಹಸಿರು ತಂಬುಳಿ, ಅಪ್ಪೆಹುಳಿ ಅತಿಥಿಗಳಿಗೆ ಅಚ್ಚುಮೆಚ್ಚು’ ಎನ್ನುತ್ತಾರೆ ಗ್ರಾಮದ ಲಕ್ಷ್ಮಿ ದೇಸಾಯಿ.
ಕೃಷಿ ಕಠಿಣ
ಸಮೃದ್ಧ ನೆಲ ಜಲದ ಈ ನಾಡು ಭತ್ತದ ಕಣಜ. ಭತ್ತವೇ ಇಲ್ಲಿನ ಪ್ರಧಾನ ಬೆಳೆ. ಸಂರಕ್ಷಿತ ಅರಣ್ಯದ ಮಗ್ಗಲಲ್ಲಿರುವ ಭೂಮಿಯಲ್ಲಿ ಕೃಷಿ ಕಠಿಣ. ಕಾಡುಕೋಣ, ಜಿಂಕೆ, ಕಾಡು ಹಂದಿ ಹಾವಳಿ ಕೃಷಿಕರನ್ನು ಹೈರಾಣಾಗಿಸಿದೆ. ಕೃಷಿಗಿಂತ ಕೂಲಿಯೇ ಲೇಸು ಎಂದು ಗೋವಾಕ್ಕೆ ನಿತ್ಯ ಪಾದಯಾತ್ರೆ ಬೆಳೆಸುತ್ತಾರೆ ಕುಣಬಿಗರು. ಹೀಗಾಗಿ ಜೊಯಿಡಾದಲ್ಲಿ ಭತ್ತ ಕೃಷಿ ಕೊನೆಯ ಸುತ್ತಿನಲ್ಲಿದೆ.
ಗಣಿ ಕೆಲಸಕ್ಕೆ ತಿಲಾಂಜಲಿ ನೀಡಿ ಜೀಪೊಂದನ್ನು ಖರೀದಿಸಿ ಸ್ವಾಭಿಮಾನಿ ಬದುಕು ಕಟ್ಟಿಕೊಂಡ ಕುಣಬಿಗ ಉದಯ ವೆಳೀಪ ತಮ್ಮ ಅನುಭವ ಬಿಚ್ಚಿಟ್ಟರು. ‘ಅನ್ನ, ಉಸಿರಿನೊಂದಿಗೆ ಒಳಸೇರಿ ಹೊಟ್ಟೆ ಕದಡುವ ದೂಳು, ಮನಸ್ಸು ಕದಡುವ ಗಣಿದಣಿಗಳ ಬೈಗುಳ ಸಹಿಸಿಕೊಂಡು ಗೋವಾದ ಗಣಿಯಲ್ಲಿ ದುಡಿಯುತ್ತಿದ್ದೆ. ಆ ಜೀವನ ಸಾಕೆನಿಸಿತು,14 ವರ್ಷಗಳ ನರಕದ ಸಹವಾಸಕ್ಕೆ ವಿದಾಯ ಹೇಳಿ ಊರಿಗೆ ಬಂದೆ. ಇಲ್ಲಿ ಕೂಲಿ ಕೆಲಸಕ್ಕೂ ಬರ. ಕೈಯಲ್ಲಿ ಕಾಸಿಲ್ಲದಾಯಿತು. ಒಮ್ಮೆ ರಸ್ತೆಯಲ್ಲಿ ಹೋಗುತ್ತಿರುವಾಗ ಪಟ್ಟಣಿಗರ ಗುಂಪನ್ನು ಕಂಡೆ. ವೇಷಭೂಷಣ, ಹಾವಭಾವದಲ್ಲೇ ಅವರು ಶಹರದ ಜನರೆಂದು ತಿಳಿಯಿತು. ಇಂಥವರೆಲ್ಲ ನಮ್ಮೂರಿಗೆ ಬರುತ್ತಾರಲ್ಲ ಎಂದು ಯೋಚಿಸಿ ಜೀಪ್ ಖರೀದಿಸಲು ಮುಂದಾದೆ. ಜೀಪ್ ಬಂದ ಮೇಲೆ ಮತ್ತೆಂದೂ ಕಿರಾಣಿ ಅಂಗಡಿಗೆ ಹೋಗಿ ಉದ್ರಿ ಕೇಳಲಿಲ್ಲ’ ಎನ್ನುವ ಅವರ ಮಾತಿನಲ್ಲಿ ಆತ್ಮವಿಶ್ವಾಸ ಬೀಗುತ್ತಿತ್ತು.
‘ಈಗ ಕೆಲಸಕ್ಕೆ ಬಿಡುವೇ ಇಲ್ಲ. ಒಮ್ಮೆ ಇಲ್ಲಿ ಚಾರಣಕ್ಕೆ ಬಂದವರು ಮತ್ತೆ ಬಂದೇ ಬರುತ್ತಾರೆ. ಕಣಿವೆ ಕಾಡಿನಲ್ಲಿ ಪ್ರವಾಸಿಗರನ್ನು ಸಫಾರಿ, ಜಲಪಾತ, ಗುಹೆ, ನೀರಾಟಕ್ಕೆ ಕರೆದೊಯ್ಯುವಾಗ ಸ್ವಚ್ಛಂದವಾಗಿ ಹಾರಾಡುವ ಬಾನಾಡಿಗಳನ್ನು ಅವರಿಗೆ ಪರಿಚಯಿಸುತ್ತೇನೆ. ಅವರಿಂದ ಕಲಿತ ಅನುಭವದಿಂದ ಸುಮಾರು 30 ಪಕ್ಷಿಗಳನ್ನು ಗುರುತಿಸಿ ಅವುಗಳ ವಿಶೇಷತೆ ಹೇಳಬಲ್ಲೆ’ ಎಂದು ಕೊಂಕಣಿಮಿಶ್ರಿತ ಕನ್ನಡದಲ್ಲಿ ಹೇಳಿದರು.
ಗೋವಾದ ಗಡಿಯಲ್ಲಿರುವ ಜೊಯಿಡಾದ ಜನರು ಕೊಂಕಣಿ ಭಾಷಿಕರು. ಕೊಂಕಣಿ ಮಾತನಾಡಿದರೆ ಕುಣಬಿಗರೊಡನೆ ತಾಸುಗಟ್ಟಲೇ ಹರಟೆ ಹೊಡೆಯಬಹುದು. ಕನ್ನಡದಲ್ಲಿ ಮಾತಿಗಿಳಿದರೆ ಒಂದೆರಡು ವಾಕ್ಯಕ್ಕೆ ಪೂರ್ಣವಿರಾಮ ಹಾಕಿ ಹೊರಟು ಬಿಡುವವರೇ ಹೆಚ್ಚು.
ದಶಕದ ಹಿಂದೆ
‘ದಶಕದ ಹಿಂದೆ ಮುಂಬೈನ ಉದ್ಯಮಿಯೊಬ್ಬರು ಮೂಲೆಯ ಜೊಯಿಡಾಕ್ಕೆ ಬಂದು ಅಡವಿ ಮಧ್ಯೆ ರೆಸಾರ್ಟ್ ಪ್ರಾರಂಭಿಸಿದಾಗ ಹುಬ್ಬೇರಿಸಿದ್ದೆವು. ಹಿತ್ತಲ ಗಿಡ ಮದ್ದಲ್ಲವಂತೆ ಹಾಗೇ ನಮ್ಮೂರಿನ ಮಹತ್ವ ತಿಳಿಯಲು ತಡವಾಯಿತು. ಚಾರಣಿಗರು ಇಲ್ಲಿನ ಪರಿಸರ ಕಂಡು ಹುಚ್ಚಾಗುತ್ತಾರೆ. ಹೆಬ್ಬಯಲಿನಂತಿರುವ ಬುಡೇರಿಯಾ (ಸೂಪಾ ಡ್ಯಾಂನ ಹಿನ್ನೀರು ಪ್ರದೇಶ, ಕೊಂಕಣಿಯಲ್ಲಿ ಬುಡೇರಿಯಾ ಎಂದರೆ ಮುಳುಗಡೆ ಪ್ರದೇಶ), ನಿಸರ್ಗದ ವಿಸ್ಮಯಗಳು ಪ್ರವಾಸಿಗರಲ್ಲಿ ನವಚೈತನ್ಯ ಮೂಡಿಸುತ್ತವೆ’ ಎನ್ನುತ್ತಾರೆ ಹೋಮ್ ಸ್ಟೇ ಮಾಲೀಕರಾದ ನವೀನ್ ಕಾಮತ್.
‘ಏಳು ವರ್ಷಗಳ ಹಿಂದೆ ಜೊಯಿಡಾಕ್ಕೆ ಪ್ರವಾಸಿಗರನ್ನು ಕರೆ ತರಲು ಎಷ್ಟೆಲ್ಲ ಸಾಹಸ ಮಾಡಬೇಕಿತ್ತು. ಹುಬ್ಬಳಿ, ಬೆಳಗಾವಿ, ಗೋವಾಕ್ಕೆ ಬರುವ ಪ್ರವಾಸಿಗರನ್ನು ನಮ್ಮ ವಾಹನದಲ್ಲಿ ಜೊಯಿಡಾಕ್ಕೆ ಕರೆದುತಂದು ಉಪಚರಿಸುತ್ತಿದ್ದೆವು. ಖಾಲಿ ಖೋಲಿಗಳಿದ್ದ ಮನೆಯಲ್ಲಿ ಉಳಿಸುತ್ತಿದ್ದೆವು. ಮರುದಿನ ನಮ್ಮ ವಾಹನದಲ್ಲಿಯೇ ಹೋಗಿ ಬಿಟ್ಟು ಬರುವಾಗ ಪ್ರವಾಸೋದ್ಯಮದ ಕಷ್ಟ ಸಾಕೆನಿಸುತ್ತಿತ್ತು. ಈಗ ಇಲ್ಲಿಗೆ ಬಂದವರು ಅವರ ಪರಿಚಿತರಲ್ಲಿ ಜೊಯಿಡಾ ಭೇಟಿ ನೀಡುವ ಉತ್ಕಟತೆ ಹುಟ್ಟಿಸುತ್ತಾರೆ. ಅದೇ ನಮ್ಮ ಹಳ್ಳಿಮನೆ ಆತಿಥ್ಯದ ಹೆಗ್ಗಳಿಕೆ’ ಎಂದವರು ಸಾಂಗ್ವಿ ಹೋಮ್ ಸ್ಟೇ ಮಾಲೀಕ ವಿಕ್ರಮ್ ಸೋಗಿ.
ತೀರಾ ಇತ್ತೀಚೆಗೆ ಜೊಯಿಡಾಕ್ಕೆ ಪದವಿ ಕಾಲೇಜು, ಡಿಪ್ಲೊಮಾ ಕಾಲೇಜು ಬಂದಿವೆ. ಒಂದೆರಡು ಬ್ಯಾಚ್ ವಿದ್ಯಾರ್ಥಿಗಳು ಹೊರಬಂದಿದ್ದಾರೆ. ಅವರೆಲ್ಲ ಊರಿನಲ್ಲಿ ನೆಲೆ ನಿಲ್ಲಬಹುದೇ, ಜೊಯಿಡಾಕ್ಕೂ ನಗರ ವಲಸೆಯ ಕಾವು ತಟ್ಟಬಹುದೇ ಎಂಬ ಪ್ರಶ್ನೆ ಹಿರಿಯ ತಲೆಮಾರಿನ ಮುಂದಿದೆ. ಹೋಮ್ ಸ್ಟೇ ನಡೆಸುವವರಲ್ಲಿ ಪದವಿ ಪಡೆದವರು ಒಂದಿಬ್ಬರು ಮಾತ್ರ. ಇವರಿಗೆಲ್ಲ ಸಸ್ಯಗಳ ವೈಜ್ಞಾನಿಕ ಹೆಸರು ಗೊತ್ತಿಲ್ಲ, ಆದರೆ ಹಿರಿಯಜ್ಜಿ ಕಲಿಸಿದ ಮನೆಮದ್ದಿನ ಪಾಠ ನೆನಪಿದೆ. ಪಕ್ಷಿತಜ್ಞರ ಹಾಗೆ ಪಕ್ಷಿಗಳ ಇಂಗ್ಲಿಷ್ ಹೆಸರು ಹೇಳಲು ತಿಳಿಯದು, ಆದರೆ ಕಾಡಿನ ಸಾಂಗತ್ಯ ಇವರಿಗೆ ಪಕ್ಷಿಗಳ ಜೀವನ ಚಕ್ರದ ಅರಿವು ಬೆಳೆಸಿದೆ. ಈ ನೆಲಮೂಲದ ಜ್ಞಾನ, ಅನುಭವದ ಅರಿವು, ಬುಡಕಟ್ಟು ಜನರ ಮುಗ್ಧತೆ, ಹಳ್ಳಿ ಸಂಸ್ಕೃತಿಯ ಅನಾವರಣ
ಜೊಯಿಡಾದ ಪ್ರವಾಸೋದ್ಯಮಕ್ಕೊಂದು ಹೊಸ ಆಯಾಮ ನೀಡಿದೆ.