ಫಾಲ್ಗುಣ ಗೌಡ ಅಚವೆ
ಮೈತುಂಬಾ ಪುಟ್ಟಪುಟ್ಟ ಹಣ್ಣುಗಳ ಗೊಂಚಲಿನಿಂದ ತುಂಬಿರುವ ಈ ಮರ ನೋಡಲಷ್ಟೇ ಸೊಗಸಲ್ಲ, ಭವಿಷ್ಯ ಹೇಳುವ ಕೆಲಸವನ್ನೂ ಮಾಡುತ್ತದೆ. ಸದ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿ ಕಾಣಸಿಗುತ್ತಿದೆ.
‘ಕಳಗಲ’, ‘ಕಣಗಲ’ ಎಂದು ಕರೆಸಿಕೊಳ್ಳುವ ಈ ಮರ, ರೈತನಿಗೆ ‘ಮಳೆ ಶಕುನ’ವನ್ನು ಹೇಳುತ್ತದೆ. ಈ ಶಕುನದಿಂದಲೇ ತಮ್ಮ ಕೃಷಿ ಕೆಲಸಗಳಿಗೆ ವಾರ್ಷಿಕ ಮಳೆಯ ಅಂದಾಜು ಮಾಡಿಕೊಳ್ಳುತ್ತಾರೆ.
ಅದು ಹೇಗೆ ಈ ಮರ ಭವಿಷ್ಯ ನುಡಿಯುತ್ತದೆ? ಇದರ ಹಿಂದೆ ಒಂದು ಲೆಕ್ಕಾಚಾರ ಅಡಗಿದೆ. ಈ ಮರ ಮೈತುಂಬ ಕಾಯಿ ಹಣ್ಣುಗಳಿಂದ ಕಂಗೊಳಿಸಿದರೆ, ಬೇಸಾಯಕ್ಕೆ ಸಾಕಾಗುವಷ್ಟು ಮಳೆಯಾಗುತ್ತದೆ ಎಂದರ್ಥ. ಬುಡದಲ್ಲಿ ಕಾಯಿಯಾದರೆ ಆರಂಭದಲ್ಲಿ ಮಾತ್ರ ಮಳೆಯಾಗುತ್ತದೆ, ಮರದ ತುದಿಯಲ್ಲಿ ಕಾಯಿಯಾದರೆ ಬೇಸಾಯದ ಕೊನೆಗೆ ಮಳೆಯಾಗುತ್ತದೆಯಂತೆ!
ಸೊಪ್ಪು, ದರಕು, ಕಟ್ಟಿಗೆಗೆಲ್ಲ ಈ ಮರವನ್ನು ಆಶ್ರಯಿಸುವ ರೈತರು, ಮಳೆಗಾಲದಲ್ಲಿ ಸೊಪ್ಪಿಗೆ ಹುಡುಕಿದರೆ, ಬೇಸಿಗೆಯಲ್ಲಿ ಉತ್ಕೃಷ್ಟ ಗೊಬ್ಬರಕ್ಕಾಗಿ ಒಣಗಿದ ಎಲೆಗಳ ರಾಶಿಯನ್ನೇ ಸಂಗ್ರಹಿಸುತ್ತಾರೆ.
ಕಳಗಲ ಮರದ ದರಕಿನ ರಾಶಿ ಹಾಕಿ ಗೋಣಿ ಹಾಕುವುದರ ಮೂಲಕ ಮಳೆಗಾಲಕ್ಕಾಗಿ ಸಂಗ್ರಹಿಸಿಕೊಳ್ಳುತ್ತಾರೆ. ಬಹೂಪಯೋಗಿಯಾಗಿರುವ ಈ ಮರ ನುಡಿಯುವ ಭವಿಷ್ಯ ಕಾಡಿನ ರೈತರಿಗಷ್ಟೇ ಅರ್ಥವಾಗುವಂಥದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.