ನವದೆಹಲಿ (ಪಿಟಿಐ): ಗಂಗಾನದಿ ಶುದ್ಧೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಹೊಸ ಕ್ರಮಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ. ನದಿಯನ್ನು ಕಲುಷಿತಗೊಳಿಸುವ ಒಳಚರಂಡಿಗಳ ಸ್ವಚ್ಛತೆಯತ್ತ ಮೊದಲು ಗಮನಹರಿಸಲಾಗುತ್ತದೆ. ಗಂಗಾ ಶುದ್ಧೀಕರಣದ ಸಂದೇಶಗಳನ್ನು ದೇಶದಾದ್ಯಂತ ಹರಡಲು ‘ಗಂಗಾ ವಾಹಿನಿ’ ಪಡೆ ಸ್ಥಾಪಿಸುವ ಬಗ್ಗೆ ಚಿಂತನೆ ನಡೆದಿದೆ.
ಗುಜರಾತ್ನ ಸಬರಮತಿ ನದಿ ದಂಡೆಯ ಅಭಿವೃದ್ಧಿ ಮಾಡಿ, ಪ್ರವಾಸಿ ತಾಣವಾಗಿ ರೂಪಿಸಿದ ಮಾದರಿಯಲ್ಲಿಯೇ ಗಂಗಾನದಿಯ ದಡದಲ್ಲಿರುವ ನಗರ ಮತ್ತು ಪಟ್ಟಣಗಳಲ್ಲಿ ನದಿ ದಂಡೆ ಅಭಿವೃದ್ಧಿ ನಡೆಸಲಾಗುವುದು. ಕಡಿಮೆ ಅವಧಿಯಲ್ಲಿ ಅವಧಿಯಲ್ಲಿ ಅನುಷ್ಠಾನಗೊಳಿಸಬಹುದಾದ ಕ್ರಮಗಳನ್ನು ಮುಂದಿನ 45 ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು.
‘ಮೊದಲಿಗೆ ನದಿಗೆ ಕೊಳಚೆ ನೀರು ಸೇರಿಸುವ ಒಳಚರಂಡಿಗಳತ್ತ ಗಮನಹರಿಸಲಾಗುವುದು. ಗಂಗೋತ್ರಿಯಿಂದ ಗಂಗಾ ಸಾಗರದವರೆಗೆ 140 ಒಳಚರಂಡಿಗಳಿವೆ. ಇವುಗಳಿಂದ ಅಪಾರ ಪ್ರಮಾಣದ ಕೊಳಚೆ ನೀರು ಗಂಗಾನದಿ ಸೇರುತ್ತಿದೆ. ನದಿ ಸೇರುವ ಹಲವು ಉಪನದಿಗಳೂ ಸಹ ಚರಂಡಿಯಂತೆಯೇ ಆಗಿವೆ’ ಎಂದು ಕೇಂದ್ರ ಜಲಸಂಪನ್ಮೂಲ ಮತ್ತು ಗಂಗಾನದಿ ಶುದ್ಧೀಕರಣ ಖಾತೆ ಸಚಿವೆ ಉಮಾ ಭಾರತಿ ತಿಳಿಸಿದ್ದಾರೆ.
ಗೋಮುಖ್ ಪ್ರದೇಶದಿಂದ ಗಂಗಾಸಾಗರದವರೆಗೆ ಹಸಿರೀಕರಣಕ್ಕೆ ಸರ್ಕಾರ ಮುಂದಾಗಿದೆ. ಒಳಚರಂಡಿಗೆ ರಾಸಾಯನಿಕ ಮತ್ತು ಕೈಗಾರಿಕಾ ತ್ಯಾಜ್ಯ ಬಿಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ರೆಡ್ ಕ್ರಾಸ್ ಮಾದರಿಯಲ್ಲಿಯೇ ‘ಗಂಗಾ ವಾಹಿನಿ’ ಎಂಬ ರಾಷ್ಟ್ರೀಯ ಸ್ವಯಂಸೇವಕರ ಪಡೆಯನ್ನು ಸ್ಥಾಪಿಸಲಾಗುವುದು. ಈ ಪಡೆಯಲ್ಲಿ ಯುವಕರು, ವಿದ್ಯಾರ್ಥಿಗಳು, ಮಾಜಿ ಯೋಧರು ಮತ್ತಿತರರು ಗಂಗಾನದಿ ಶುದ್ಧೀಕರಣದ ಸಂದೇಶಗಳನ್ನು ದೇಶದಾದ್ಯಂತ ಹರಡಲಿದ್ದಾರೆ ಎಂದು ಅವರ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.