ನವದೆಹಲಿ: ಕಳಪೆ ಗುಣಮಟ್ಟದ ಹೆಲ್ಮೆಟ್ ತಯಾರಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸಾರಿಗೆ ಮತ್ತು ಬಂದರು ಸಚಿವ ನಿತಿನ್ ಗಡ್ಕರಿ ಅವರಿಗೆ ಹಿರಿಯ ಕ್ರಿಕೆಟಿಗ ಹಾಗೂ ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಇತ್ತೀಚೆಗೆ ದ್ವಿಚಕ್ರ ವಾಹನ ಅಪಘಾತಗಳು ಹೆಚ್ಚಾಗುತ್ತಿವೆ. ಹಾಗಾಗಿ ಜೀವ ಉಳಿಸುವ ಹೆಲ್ಮೆಟ್ನಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವುದು ಮುಖ್ಯ ಎಂಬ ಅಂಶವನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಹೆಲ್ಮೆಟ್ ತಯಾರಿಕೆಯಲ್ಲಿ ಕಳಪೆ ಗುಣಮಟ್ಟದ ವಸ್ತುಗಳು ಬಳಕೆಯಾಗುತ್ತಿರುವುದರ ಬಗ್ಗೆ ಕ್ರಮ ಜರುಗಿಸಬೇಕು ಎಂದು ಈ ಮೂಲಕ ನಿಮ್ಮ ಸಚಿವಾಲಯಕ್ಕೆ ಮನವಿ ಮಾಡುತ್ತಿದ್ದೇನೆ. ಹಲವೆಡೆ ಐಎಸ್ಐ ಗುರುತು ಇಲ್ಲದ ನಕಲಿ ಹೆಲ್ಮೆಟ್ಗಳನ್ನು ಮಾರಾಟ ಮಾಡಲಾಗುತ್ತಿದೆ. ಆಟಗಾರರಾಗಿ ಮೈದಾನದಲ್ಲಿ ಆಡುವ ನಾವು ಗುಣಮಟ್ಟದ ಸುರಕ್ಷಿತ ಉಪಕರಣಗಳ ಬಳಕೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವೆವು’ ಎಂದು ಪತ್ರದಲ್ಲಿ ಬರೆದಿದ್ದಾರೆ.
ಅಲ್ಲದೆ ಸಚಿನ್ ಅವರು ಸಂಚಾರ ವ್ಯವಸ್ಥೆ, ರಸ್ತೆ ಸುರಕ್ಷತಾ ಕ್ರಮಗಳನ್ನು ಕಾಪಾಡುವ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಕೈಗೊಂಡಿದ್ದಾರೆ.
‘ಶೇ 70ರಷ್ಟು ಮಂದಿ ನಕಲಿ ಹೆಲ್ಮೆಟ್ಗಳನ್ನು ಕೊಳ್ಳುವುದನ್ನು ಕೈ ಬಿಟ್ಟಿದ್ದಾರೆ. ಶೇ 30ರಷ್ಟು ಅಪಘಾತಗಳು ಹೆಚ್ಚಾಗಿರುವ ಕಾರಣ ಇದು ನಿಜವಾಗಿಯೂ ದ್ವಿಚಕ್ರ ವಾಹನ ಸವಾರರನ್ನು ಎಚ್ಚರಿಸುವ ಸಮಯ’ ಎಂದು ಸಚಿನ್ ಹೇಳಿದ್ದಾರೆ.
‘ಈ ಬಗ್ಗೆ ಸಚಿವಾಲಯ ಅರ್ಥಮಾಡಿಕೊಂಡು ಸಾರ್ವಜನಿಕ ಸುರಕ್ಷತೆ ಬಗ್ಗೆ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದೇನೆ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.