ADVERTISEMENT

ಕಾಸಿಗಾಗಿ ಸುದ್ದಿ: ಚುನಾವಣಾ ಅಪರಾಧ

ಕಾನೂನು ಸಚಿವಾಲಯಕ್ಕೆ ಚುನಾವಣಾ ಆಯೋಗ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2014, 19:30 IST
Last Updated 21 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಚುನಾವಣೆ ವೇಳೆ ರಾಜಕೀಯ ಪಕ್ಷಗಳನ್ನು ನಿಯಂತ್ರಣದ­ಲ್ಲಿ­ರಿಸಲು ಕೇಂದ್ರ ಚುನಾವಣಾ ಆಯೋಗವು ‘ಕಾಸಿಗಾಗಿ ಸುದ್ದಿ’ಯನ್ನು ಚುನಾವಣಾ ಅಪರಾಧ ಎಂದು ಪರಿಗಣಿಸುವ ಪ್ರಸ್ತಾಪವನ್ನು ಕಾನೂನು ಸಚಿವಾಲಯದ ಮುಂದಿಟ್ಟಿದೆ.

ವಿವಿಧ ಮೂಲಗಳಿಂದ ಅಕ್ರಮವಾಗಿ ಹಣ ಬಳಕೆಯಾಗುವುದನ್ನು ತಪ್ಪಿಸಲು ಪಕ್ಷಗಳ ಪ್ರಚಾರ ವೆಚ್ಚಕ್್ಕೆ ಕಡಿವಾಣ ಹಾಕಲು ಸಹ ಅದು ಚಿಂತನೆ ನಡೆಸಿದೆ.

‘ಕಾಸಿಗಾಗಿ ಸುದ್ದಿಯನ್ನು ಚುನಾ­ವಣಾ ಅಪರಾಧ ಎಂದು ಪರಿಗಣಿಸಿದರೆ ಕಾನೂನು ಉಲ್ಲಂಘಿಸುವವರನ್ನು ನಿಯಂತ್ರಿಸಲು ಸಾಧ್ಯ’ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್‌. ಸಂಪತ್ ಅವರು ಅಭಿಪ್ರಾಯಪಟ್ಟರು.

‘ಕಾಸಿಗಾಗಿ ಸುದ್ದಿಯು ಆಯೋಗಕ್ಕೆ  ಗಂಭೀರ ಕಳವಳದ ಸಂಗತಿಯಾಗಿದೆ. ಈಗಿನ ಕಾನೂನಿನಂತೆ ಅದು ಚುನಾವಣಾ ಅಪರಾಧವಲ್ಲ. ಹೀಗಾಗಿ ‘ಕಾಸಿಗಾಗಿ ಸುದ್ದಿ’ಯನ್ನು ಚುನಾವಣಾ ಅಪರಾಧ ಎಂದು ಪರಿಗಣಿಸುವಂತೆ ಕಾನೂನು ಸಚಿವಾಲಯಕ್ಕೆ ಪ್ರಸ್ತಾಪ ಸಲ್ಲಿಸಿದ್ದೇವೆ’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

‘ಕಾಸಿಗಾಗಿ ಸುದ್ದಿ’ಯನ್ನು ಚುನಾ­ವಣಾ ಅಪರಾಧವನ್ನಾಗಿಸಿದರೆ ತಪ್ಪಿತಸ್ಥ ಅಭ್ಯರ್ಥಿಯ ವಿರುದ್ಧ ಕ್ರಮ ತೆಗೆದು­ಕೊಳ್ಳಲು ಸಾಧ್ಯ’ ಎಂದರು.

‘ಆಯೋಗ ಎರಡು ವರ್ಷಗಳ ಹಿಂದೆಯೇ ಈ ಪ್ರಸ್ತಾಪವನ್ನು ಸರ್ಕಾ­ರದ ಮುಂದಿಟ್ಟಿತ್ತು. ಈಗ ತೆಗೆದುಕೊಳ್ಳ­ಲಾ­ಗುತ್ತಿರುವ ಕ್ರಮಕ್ಕೆ ಕಾನೂನಿನ ಬೆಂಬಲ­ವಿಲ್ಲ. ಒಂದು ವೇಳೆ ಕಾನೂನಿನ ಅನುಮೋದನೆ ಸಿಕ್ಕರೆ ಕಠಿಣ ಕ್ರಮ ತೆಗೆದುಕೊಳ್ಳಬಹುದು’ ಎಂದರು.

‘ಪಕ್ಷಗಳು ಮಾಡುವ ಚುನಾವಣಾ ವೆಚ್ಚಕ್ಕೆ ಮಿತಿ ಹೇರಿಲ್ಲ. ಆದರೆ ಅಭ್ಯರ್ಥಿಗಳು ಮಾಡುವ ವೆಚ್ಚಕ್ಕೆ ನಿರ್ಬಂಧವಿದೆ. ರಾಜಕೀಯ ಪಕ್ಷಗಳು ಮಾಡುವ ವೆಚ್ಚಕ್ಕೂ ಮಿತಿ ಹೇರಬೇಕಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.