ಮುಂಬೈ (ಏಜೆನ್ಸೀಸ್): ಮುಂಬೈನಲ್ಲಿ 2011ರಲ್ಲಿ ನಡೆದಿದ್ದ ಕೀನನ್- ರೂಬಿನ್ ಕೊಲೆ ಪ್ರಕರಣದ ನಾಲ್ಕು ಮಂದಿ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿರುವ ವಿಚಾರಣಾ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಜಿತೇಂದ್ರ ರಾಣಾ, ಸುನಿಲ್ ಬೋಧ್, ಸತೀಶ್ ದುಲ್ಹಜ್ ಮತ್ತು ದೀಪಕ್ ತಿವಾಲ್ ಶಿಕ್ಷೆಗೊಳಗಾದ ಅಪರಾಧಿಗಳು.
ಕೀನನ್ ಸಂತೋಷ್ ಮತ್ತು ರೂಬಿನ್ ಫರ್ನಾಂಡಿಸ್ ಅವರು 2011ರ ಅಕ್ಟೋಬರ್ 20ರಂದು ಮುಂಬೈನ ಅಂಬೋಲಿಯ ರೆಸ್ಟೊರಂಟ್ ಒಂದರ ಎದುರು ಇದ್ದ ವೇಳೆ ಈ 4 ಮಂದಿ ದುಷ್ಕರ್ಮಿಗಳು ಕೀನನ್ ಮತ್ತು ರೂಬಿನ್ ಅವರ ಸ್ನೇಹಿತೆಯರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದರು.
ಸ್ನೇಹಿತೆಯರ ರಕ್ಷಣೆಗೆ ಮುಂದಾಗಿದ್ದ ಕೀನನ್ ಮತ್ತು ರೂಬಿನ್ ಅವರಿಗೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇರಿದಿದ್ದರು. ಕೀನನ್ ಅದೇ ದಿನ ಮೃತಪಟ್ಟರೆ, ರೂಬಿನ್ ಅಕ್ಟೋಬರ್ 30ರಂದು ಕೊನೆಯುಸಿರೆಳೆದಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಅಪರಾಧಿಗಳಿಗೆ ‘ಸಾಯುವವರೆಗೆ ಜೀವಾವಧಿ ಶಿಕ್ಷೆ’ ವಿಧಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.