ADVERTISEMENT

ಕೇರಳದಲ್ಲಿ ಚಿಕಿತ್ಸೆಗೆ ಮದನಿ ಮನವಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2014, 19:30 IST
Last Updated 17 ಸೆಪ್ಟೆಂಬರ್ 2014, 19:30 IST

ನವದೆಹಲಿ: ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಂಗಳೂರು ಸರಣಿ ಬಾಂಬ್‌ ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್‌ ನಾಸಿರ್ ಮದನಿ, ಚಿಕಿತ್ಸೆಗಾಗಿ ಕೇರಳಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮದನಿ, ಆಯುರ್ವೇದ ಚಿಕಿತ್ಸೆಗಾಗಿ ಕೇರಳಕ್ಕೆ ತೆರಳಲು ತಮಗೆ ಅನುಮತಿ ನೀಡುವಂತೆ ಪ್ರಮಾಣ ಪತ್ರದಲ್ಲಿ ಮನವಿ ಮಾಡಿ­ದ್ದಾರೆ. ತಾವು ಕಣ್ಣು ಮತ್ತು ಮಧುಮೇಹ ತೊಂದರೆಗೆ ಒಳ­ಗಾ­ಗಿದ್ದು, ಮಧು­ಮೇಹ ನಿಯಂತ್ರ­ಣಕ್ಕೆ ಬರದೆ ಕಣ್ಣಿನ ಚಿಕಿತ್ಸೆ ಸಾಧ್ಯವಿಲ್ಲ ಎಂದು ಬೆಂಗ­ಳೂರಿನ ವೈದ್ಯರು ಹೇಳಿದ್ದಾರೆ. ಆಯುರ್ವೇದ ಚಿಕಿತ್ಸೆ­ಯಿಂದ ಮಧುಮೇಹ ನಿಯಂತ್ರಣಕ್ಕೆ ಬರಲಿದೆ. ಹಿಂದೆಯೂ ತಾವು ಕೇರಳ­ದಲ್ಲಿ ಈ ಚಿಕಿತ್ಸೆ ಪಡೆದಿದ್ದಾಗಿ ಮದನಿ ತಿಳಿಸಿದ್ದಾರೆ.

ಚಿಕಿತ್ಸೆಗಾಗಿ ತಮಗೆ ಜಾಮೀನು ನೀಡಲಾಗಿದ್ದು ಬೆಂಗಳೂರು ಬಿಡದಂತೆ ಷರತ್ತು ಹಾಕಲಾಗಿದೆ.  ಕೇರಳದಲ್ಲಿ ಉತ್ತಮ ಆಯುರ್ವೇದ ಚಿಕಿತ್ಸೆ ದೊರೆಯಲಿದ್ದು, ಅಲ್ಲಿಗೆ ಹೋಗಲು ಅನುಮತಿ ನೀಡುವಂತೆ ಮದನಿ ಕೇಳಿದ್ದಾರೆ. ಅವರ ಅರ್ಜಿ ಈ ತಿಂಗಳ 19ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.2008ರಲ್ಲಿ ಬೆಂಗಳೂರು ನಗರದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದಲ್ಲಿ ಮದನಿ ಪ್ರಮುಖ ಆರೋಪಿ­ಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.