ನವದೆಹಲಿ (ಪಿಟಿಐ): ಗೃಹಸಚಿವ ರಾಜನಾಥ್ ಸಿಂಗ್ ಅವರ ಪುತ್ರನ ದುರ್ನಡತೆ ಕುರಿತು ಕೇಳಿಬಂದಿರುವ ಆರೋಪದ ಬಗ್ಗೆ ಪ್ರಧಾನಿ ಮೋದಿ ಮತ್ತು ರಾಜನಾಥ್ ಸಿಂಗ್ ಅಷ್ಟೊಂದು ಚುರುಕಾಗಿ ಪ್ರತಿಕ್ರಿಯಿಸಲು ಕಾರಣವೇನು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಸಚಿವರ ಪುತ್ರನ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ಹೀಗಿರುವಾಗ ಅವರ ವಿರುದ್ಧ ಆರೋಪ ಮಾಡಿರುವುದು ಯಾರು? ಆ ಆರೋಪಗಳು ಯಾವುವು? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ಕೇಳಿದ್ದಾರೆ.
ರಾಜನಾಥ್ ಪುತ್ರನ ಕುರಿತು ರಾಷ್ಟ್ರಮಟ್ಟದ ದಿನಪತ್ರಿಕೆಗಳಲ್ಲಿ ಕೆಲ ದಿನಗಳಿಂದ ವರದಿಗಳು ಪ್ರಕಟವಾಗುತ್ತಲೇ ಇವೆ. ಇಷ್ಟೊಂದು ತಡವಾಗಿ ಸ್ಪಷ್ಟನೆ ನೀಡಿದ್ದು ಏಕೆ? ಬೆಂಕಿಯಿಲ್ಲದೇ ಹೊಗೆಯಾಡಲು ಸಾಧ್ಯವಿಲ್ಲ. ಒಳಗೊಳಗೆ ತಿಕ್ಕಾಟವಿದೆ ಎಂಬುದು ಇದರಿಂದ ತಿಳಿಯುತ್ತದೆ . ಬಿಜೆಪಿಯಲ್ಲಿ ಎಲ್ಲವೂ ಹೇಗಿರಬೇಕು ಎಂದು ನಿರ್ಧರಿಸುವುದು ಆರ್ಎಸ್ಎಸ್ ಎಂದು ಸಿಪಿಐ ನಾಯಕ ಡಿ. ರಾಜಾ ಹೇಳಿದ್ದಾರೆ.
ಆದರೆ, ಜೆಡಿಯು ನಾಯಕ ಶರದ್ ಯಾವದ್ ಹಾಗೂ ಎನ್ಸಿಪಿ ನಾಯಕ ಡಿ.ಪಿ. ತ್ರಿಪಾಠಿ ರಾಜನಾಥ್ ಸಿಂಗ್ ಅವರು ಪರಿಶುದ್ಧ ವ್ಯಕ್ತಿ. ಅವರ ಕುಟುಂಬ ಅವ್ಯವಹಾರದಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಶ್ಲಾಘಿಸಿದ್ದಾರೆ.
ರಾಜನಾಥ್ ಸಿಂಗ್ ಪುತ್ರ ಪಂಕಜ್ ದುರ್ನಡತೆ ಕಾರಣ ಪ್ರಧಾನಿ ಮೋದಿ, ಅವರನ್ನು (ಪಂಕಜ್) ತರಾಟೆಗೆ ತೆಗೆದುಕೊಂಡಿದ್ದರು ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಸಚಿವ ರಾಜನಾಥ್ ಸಿಂಗ್ ಹಾಗೂ ಪ್ರಧಾನಿ ಕಚೇರಿ ಬುಧವಾರ ತರಾತುರಿಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.