ನವದೆಹಲಿ (ಪಿಟಿಐ): ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೆರವುಗೊಳಿಸಿದೆ.
ಜಯಲಲಿತಾ ಅವರದ್ದು ಎನ್ನಲಾದ ಆಸ್ತಿಯಲ್ಲಿ ಕೆಲವು ಸ್ವತ್ತುಗಳು ನಿಜವಾಗಿಯೂ ತಮಗೆ ಸೇರಿದ್ದು ಎಂದು ಆರೋಪಿಸಿ ಕಂಪೆನಿಯೊಂದು ಸಲ್ಲಿರುವ ಅರ್ಜಿಯನ್ನು ಕೆಳ ಹಂತದ ನ್ಯಾಯಾಲಯ ಇತ್ಯರ್ಥ ಪಡಿಸುವ ತನಕ ತಮ್ಮ ವಿರುದ್ಧದ ವಿಚಾರಣೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಂಜಿತ್ ಸೇನ್ ಹಾಗೂ ಎಸ್.ಕೆ.ಸಿಂಗ್ ಅವರಿದ್ದ ಪೀಠ ವಜಾಗೊಳಿಸಿತು.
2003ರಲ್ಲಿ ಜಯಾ ಅವರು ಮುಖ್ಯಮಂತ್ರಿಯಾಗಿದ್ದರು. ಅಧಿಕಾರದಲ್ಲಿದ್ದು ಚೆನ್ನೈನಲ್ಲಿ ವಿಚಾರಣೆ ನಡೆದರೆ ಪಾರದರ್ಶಕ ವಿಚಾರಣೆಗೆ ಸಾಧ್ಯವಾಗದು ಎಂದು ಆರೋಪಿಸಿ ಸಲ್ಲಿಕೆಯಾದ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ಮೇರೆಗೆ ಪ್ರಕರಣದ ವಿಚಾರಣೆಯನ್ನು ತಮಿಳುನಾಡಿನಿಂದ ಬೆಂಗಳೂರಿಗೆ ವರ್ಗಾಯಿಸಲಾಗಿತ್ತು.
ತಮ್ಮ ಆದಾಯ ಮೂಲಗಳಿಂದ 66 ಕೋಟಿ ರೂಪಾಯಿ ಅಕ್ರಮ ಆಸ್ತಿ ಗಳಿಸಿದ ಆರೋಪ ಜಯಲಲಿತಾ ಅವರ ಮೇಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.