ಚಂಡೀಗಡ/ನವದೆಹಲಿ: ಹರಿಯಾಣ ವಿಧಾನಸಭೆಯಲ್ಲಿ ಮಾತನಾಡಿದ ಜೈನ ಮುನಿ ತರುಣ್ ಸಾಗರ್ ಅವರನ್ನು ಸಂಗೀತ ನಿರ್ದೇಶಕ ವಿಶಾಲ್ ದಾದ್ಲಾನಿ ಟ್ವಿಟರ್ ಮೂಲಕ ಟೀಕಿಸಿರುವುದು ವಿವಾದ ಸೃಷ್ಟಿಸಿದ್ದು, ದೆಹಲಿ ಲೋಕೋಪಯೋಗಿ ಸಚಿವ ಸತ್ಯೇಂದ್ರ ಜೈನ್ ತರುಣ್ ಸಾಗರ್ ಅವರನ್ನು ಚಂಡೀಗಡದಲ್ಲಿ ಭೇಟಿಮಾಡಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ವಿಶಾಲ್ ಎಎಪಿ ಬೆಂಬಲಿಗರಾಗಿದ್ದು, ತಮ್ಮ ಟ್ವಿಟರ್ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಅದನ್ನು ತೆಗೆದು ಹಾಕಿದ್ದಾರೆ. ಜತೆಗೆ ‘ಇನ್ನು ಮುಂದೆ ಇಂಥ ರಾಜಕೀಯ ವಿಚಾರಗಳಿಂದ ದೂರ ಉಳಿಯುತ್ತೇನೆ’ ಎಂದಿದ್ದರು. ಆದರೆ ಮುನಿಯನ್ನು ನಿಂದಿಸಿದ ದಾದ್ಲಾನಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಜೈನ ಸಮುದಾಯದ ಸದಸ್ಯರು ನವದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಸಮೀಪ ಪ್ರತಿಭಟನೆ ನಡೆಸಿದರು.
‘ನಾನು ತರುಣ್ ಸಾಗರ್ ಅವರನ್ನು ಭೇಟಿ ಮಾಡಿ ವಿವಾದದ ಬಗ್ಗೆ ಮಾತನಾಡಿದ್ದೇನೆ. ‘ದಾದ್ಲಾನಿ ಟೀಕೆಯಿಂದ ನನಗೆ ಬೇಸರವಾಗಿಲ್ಲ, ಕ್ಷಮೆ ಯಾಚಿಸುವ ತಪ್ಪೇನೂ ಅವರು ಮಾಡಿಲ್ಲ’ ಎಂದು ಮುನಿಗಳು ಹೇಳಿದ್ದಾರೆ ’ ಎಂದು ಸಚಿವರು ಪ್ರತಿಭಟನಾಕಾರರಿಗೆ ತಿಳಿಸಿದ್ದಾರೆ.
ವಿವಾದ ತಣ್ಣಗಾಗಿಸಲು ಎಎಪಿ ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ‘ದಾದ್ಲಾನಿ ಸೇರಿದಂತೆ ಎಎಪಿಯ ಯಾರೂ ಪ್ರಕರಣದ ಬಗ್ಗೆ ಕ್ಷಮೆಯಾಚಿಸಿಲ್ಲ, ಕಾಂಗ್ರೆಸ್ನ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಬೆಂಬಲಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ದಾದ್ಲಾನಿ ಹೇಳಿಕೆಗೆ ಕೇಜ್ರಿವಾಲ್ ಕ್ಷಮೆ ಕೋರಿದ್ದರು.
ದಾದ್ಲಾನಿ ವಿರುದ್ಧ ದೂರು ದಾಖಲು
ಅಂಬಾಲ/ಚಂಡೀಗಡ(ಪಿಟಿಐ): ಜೈನ ಮುನಿ ತರುಣ್ ಸಾಗರ್ ಅವರನ್ನು ಟ್ವಿಟರ್ನಲ್ಲಿ ಟೀಕಿಸಿದ್ದ ದಾದ್ಲಾನಿ ವಿರುದ್ಧ ದೂರು ದಾಖಲಾಗಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ದಾದ್ಲಾನಿ ಮತ್ತು ತಹಸೀನ್ ಪೂನಾವಾಲ ಅವರ ವಿರುದ್ಧ ದೂರು ದಾಖಲಿಸಲಾಗಿದೆ ಅಂಬಾಲ ಕಂಟೋನ್ಮೆಂಟ್ ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.