ಛತ್ತರ್ಪುರ (ಮಧ್ಯಪ್ರದೇಶ) : ಮೇಲ್ವರ್ಗದ ವ್ಯಕ್ತಿಯೊಬ್ಬ ಆರು ವರ್ಷದ ದಲಿತ ಬಾಲಕಿಗೆ ಆಕೆಯ ಮಲವನ್ನು ಬರಿಗೈಲಿ ಎತ್ತುವಂತೆ ಆಗ್ರಹಿಸಿದ ಘಟನೆ ಲವಕುಶ ನಗರ ತಾಲ್ಲೂಕಿನ ಗುಧೋರ ಎಂಬ ಗ್ರಾಮದಲ್ಲಿರುವ ಆಕೆಯ ಶಾಲೆಯ ಹೊರಭಾಗದಲ್ಲಿ ನಡೆದಿದೆ.
ಸೋಮವಾರ ಸಂಜೆ ಈ ಬಾಲಕಿ ಶಿಕ್ಷಕಿಯ ಅನುಮತಿ ಪಡೆದು ಶಾಲೆಯ ಹೊರಬಂದು, ಸಮೀಪದಲ್ಲಿರುವ ಬಯಲಿನಲ್ಲಿ ಮಲವಿಸರ್ಜನೆ ಮಾಡುತ್ತಿದ್ದಳು. ಇದನ್ನು ಗಮನಿಸಿದ ಆರೋಪಿ ಪಪ್ಪು ಸಿಂಗ್ ಆಕ್ರೋಶಗೊಂಡು, ಒತ್ತಾಯಪೂರ್ವಕವಾಗಿ ಆಕೆ ತನ್ನ ಕೈಗಳಿಂದಲೇ ಮಲವನ್ನು ಎತ್ತಿ ದೂರ ಹಾಕುವಂತೆ ಮಾಡಿದ್ದಾಗಿ ಪೊಲೀಸ್ ಅಧಿಕಾರಿ ಜಡ್.ವೈ.ಖಾನ್ ತಿಳಿಸಿದ್ದಾರೆ.
‘ಮಲ ಎತ್ತಲು ಒತ್ತಾಯಿಸಿದ್ದನ್ನು ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ಆನಂತರ ಅವರು ದಲಿತ ಸಮುದಾಯದ ಸದಸ್ಯರೊಂದಿಗೆ ಠಾಣೆಗೆ ಬಂದು ಸಿಂಗ್ ವಿರುದ್ಧ ದೂರು ನೀಡಿದ್ದಾರೆ’ ಎಂದು ಖಾನ್ ಹೇಳಿದ್ದಾರೆ. ಕಾನೂನುಬಾಹಿರವಾಗಿ ಕಡ್ಡಾಯ ದುಡಿಮೆ, ಶಾಂತಿ ಕದಡುವ ಸಲುವಾಗಿ ಉದ್ದೇಶಪೂರ್ವಕ ಅವಮಾನ, ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.