ಗೋರಖಪುರ: ಯುವರಾಜ ರಾಹುಲ್ ಗಾಂಧಿ ಅವರು ದೆಹಲಿಯಲ್ಲಿ ಕುಳಿತುಕೊಂಡು ಗೋರಖಪುರವನ್ನು ಪ್ರವಾಸಿತಾಣ ಮಾಡಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಟೀಕಿಸಿದ್ದಾರೆ.
ಇತ್ತೀಚೆಗೆ ಇಲ್ಲಿ ಬಿಆರ್ಡಿ ಆಸ್ಪತ್ರೆಯಲ್ಲಿ 71 ಹಸುಳೆಗಳು ಸಾವಿನ್ನಪ್ಪಿದ ಘಟನೆ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ಇಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಖ್ ಯಾದವ್ ವಿರುದ್ಧವೂ ಹರಿಹಾಯ್ದರು.
‘ಲಖನೌದಲ್ಲಿ ಕೂತಿರುವ ಶಹಜಾದಾ (ಅಖಿಲೇಶ್), ದೆಹಲಿಯಲ್ಲಿ ಕೂತಿರುವ ಯುವರಾಜಗೆ (ರಾಹುಲ್) ಸ್ವಚ್ಛತೆಯ ಮಹತ್ವದ ಬಗ್ಗೆ ಅರಿವಿಲ್ಲ. ನೀವಿಲ್ಲಿ ಬಂದು ಇದನ್ನು ಪ್ರವಾಸಿತಾಣ ಮಾಡಬಹುದು, ಇದಕ್ಕೆ ಯಾವುದೇ ನಿರ್ಬಂಧವಿಲ್ಲ’ ಎಂದು ಅವರು ಹೇಳಿದ್ದಾರೆ.
ಮೃತಪಟ್ಟ ಮಕ್ಕಳ ಕುಟುಂಬದವರನ್ನು ಭೇಟಿಯಾಗಲು ರಾಹುಲ್ ಅವರು ಗೋರಖಪುರಕ್ಕೆ ಬರುವ ಕೆಲ ಗಂಟೆಗಳ ಮುನ್ನ ಯೋಗಿ ಈ ಹೇಳಿಕೆ ನೀಡಿದ್ದಾರೆ. ರಾಹುಲ್ ಅವರ ಭೇಟಿಯಿಂದ ಯೋಗಿ ಅವರು ದಿಗಿಲುಗೊಂಡಿದ್ದಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
‘ಯಾವುದೇ ಕ್ರಮ ಕೈಗೊಳ್ಳದ ಮುಖ್ಯಮಂತ್ರಿಗಳು ವಿಷಯವನ್ನು ಬೇರೆಡೆ ತಿರುಗಿಸಲು ಯತ್ನಿಸುತ್ತಿದ್ದಾರೆ. ತಮ್ಮ ಸ್ಥಾನದ ಘಟನೆಯನ್ನು ಮರೆತು ಅವರು ಕ್ಷುಲ್ಲಗ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜ್ ಬಬ್ಬರ್ ಹೇಳಿದ್ದಾರೆ.
ರಾಹುಲ್ ಭೇಟಿ: ಮೃತಪಟ್ಟ ಮಕ್ಕಳ ಕುಟುಂಬದವನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು. ಗುಲಾಂ ನಬಿ ಆಜಾದ್ ಹಾಗೂ ಆರ್ಪಿಎನ್ ಸಿಂಗ್ ಅವರು ಇವರ ಜತೆಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.