ADVERTISEMENT

ನೋಟು ರದ್ದತಿ ನಂತರ ಕಾಶ್ಮೀರದಲ್ಲಿ ಕಲ್ಲು ತೂರಾಟ ಕಡಿಮೆಯಾಯಿತು: ಅರುಣ್ ಜೇಟ್ಲಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 16:56 IST
Last Updated 7 ನವೆಂಬರ್ 2017, 16:56 IST
ಅರುಣ್ ಜೇಟ್ಲಿ  (ಕೃಪೆ ಟ್ಲಿಟರ್)
ಅರುಣ್ ಜೇಟ್ಲಿ (ಕೃಪೆ ಟ್ಲಿಟರ್)   

ನವದೆಹಲಿ: ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಕಾಶ್ಮೀರದಲ್ಲಿ ಕಲ್ಲು ತೂರಾಟ ಕಡಿಮೆಯಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ  ಹೇಳಿದ್ದಾರೆ.

ನೋಟು ರದ್ದತಿಯಿಂದಾಗಿ ಜಮ್ಮು ಕಾಶ್ಮೀರದಲ್ಲಿ ಪ್ರತಿಭಟನೆಗಳು, ಕಲ್ಲು ತೂರಾಟ ಕಡಿಮೆಯಾಗಿದೆ. ಅಷ್ಟೇ ಎಲ್ಲ ಎಡಪಂಥೀಯ ಉಗ್ರವಾದವಿರುವ ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಗಣನೀಯ ಇಳಿಕೆಯಾಗಿದೆ.  ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಇಲ್ಲಿಗೆ ಬರುತ್ತಿದ್ದ ಹಣದ ಹರಿವು ಕಡಿಮೆಯಾಯಿತು ಎಂದಿದ್ದಾರೆ ಜೇಟ್ಲಿ.

ನೋಟು ರದ್ದತಿಯಿಂದಾದ ಉಪಯೋಗಗಳ ಬಗ್ಗೆ ಜೇಟ್ಲಿ ಅವರು ತಮ್ಮ ಬ್ಲಾಗ್‍ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.

ADVERTISEMENT

ಸೌತ್ ಏಷ್ಯನ್ ಟೆರರಿಸಂ ಪೋರ್ಟಲ್‍ನಲ್ಲಿ ನೀಡಿದ ಅಂಕಿ ಅಂಶ ಪ್ರಕಾರ ನೋಟು ರದ್ದತಿ ನಂತರ ಭಯೋತ್ಪಾದನಾ ಕೃತ್ಯಗಳಿಂದ ಸಾವಿಗೀಡಾದವರ ಸಂಖ್ಯೆ ಏರಿಕೆಯಾಗಿದೆ. 2016ರಲ್ಲಿ 267 ಮಂದಿ ಸಾವನ್ನಪ್ಪಿದರೆ 2017  ಅಕ್ಟೋಬರ್ 31ರ ವರೆಗೆ ಸಾವಿಗೀಡಾವರ ಸಂಖ್ಯೆ 298.

2016ರಲ್ಲಿ 16 ಕಾಶ್ಮೀರಿ ನಿವಾಸಿಗಳು, 88 ಯೋಧರು, 165 ಉಗ್ರರು ಬಲಿಯಾಗಿದ್ದಾರೆ.  ಅದೇ ವೇಳೆ  2017ರಲ್ಲಿ  53 ಕಾಶ್ಮೀರಿಗಳು, 67 ಯೋಧರು ಮತ್ತು 178 ಉಗ್ರರು ಬಲಿಯಾಗಿದ್ದಾರೆ.

2015 -16 ವರ್ಷದೊಂದಿಗೆ ಹೋಲಿಕೆ ಮಾಡಿ ನೋಡಿದರೆ ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡ ಹಣದಲ್ಲಿ  ಏರಿಕೆಯಾಗಿದೆ.

2016-17ರಲ್ಲಿ 13,716 ಕೋಟಿ ಲೆಕ್ಕ ರಹಿತ ಹಣ ವಶ ಪಡಿಸಿಕೊಳ್ಳಲಾಗಿದೆ. ಹೀಗೆ ವಶ ಪಡಿಸಿಕೊಂಡ ಹಣದಲ್ಲಿ 2015-16 ಅವಧಿಗಿಂತ ಶೇ.41 ಏರಿಕೆಯಾಗಿದೆ.

ನೋಟು ರದ್ದು ಮಾಡಿದ ನಂತರ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಹೆಚ್ಚಿದೆ. ನೋಟು ರದ್ದತಿಯಿಂದ ಏನು ಲಾಭ ಎಂದು ಈಗ ಹೇಳಲು ಸಾಧ್ಯವಿಲ್ಲ. ಮುಂದಿನ ತಲೆಮಾರು  2016 ನವೆಂಬರ್ ನಂತರದ ಆರ್ಥಿಕ ಬೆಳವಣಿಗೆಯನ್ನು ಅಭಿಮಾನದಿಂದ ಕಾಣಲಿದೆ ಎಂದಿದ್ದಾರೆ ಜೇಟ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.