ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಫೈನಲ್ನಲ್ಲಿ ಪಾಕಿಸ್ತಾನದ ಪರ ವಿಜಯೋತ್ಸವ ಆಚರಿಸಿದವರು ಆ ದೇಶಕ್ಕೇ ಹೋಗಿ ನೆಲೆಸಲಿ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಗೈರುಲ್ ಹಸನ್ ರಿಜ್ವಿ ಹೇಳಿದ್ದಾರೆ.
ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸುತ್ತಿದ್ದಂತೆ ದೇಶದ ಕೆಲವೆಡೆ ಪಾಕಿಸ್ತಾನದ ಪರವಾಗಿ ವಿಜಯೋತ್ಸವ ಆಚರಿಸಿದ ವರದಿಗಳ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.
‘ಒಂದು ವೇಳೆ ಈ ಪ್ರಶ್ನೆಗೆ ನಾನು ಪ್ರತಿಕ್ರಿಯಿಸದಿದ್ದರೆ ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನದ ವಿಜಯಕ್ಕಾಗಿ ಸಂಭ್ರಮಿಸುವವರನ್ನು ಬೆಂಬಲಿಸುತ್ತೇನೆ ಎಂದು ಎಣಿಸಲಾಗುತ್ತದೆ. ಅಲ್ಲದೆ ಅವರು ಹಾಗೆ ಆಚರಿಸಿದ್ದು ತಪ್ಪು ಎಂದು ಸಹ ನನಗನಿಸಿದೆ’ ಎಂದಿದ್ದಾರೆ.
ಮಧ್ಯಪ್ರದೇಶ, ಕೇರಳ ಮತ್ತಿತರ ಕಡೆ ಹೀಗೆ ವಿಜಯೋತ್ಸವ ಆಚರಿಸಿದ್ದು ವರದಿಯಾಗಿತ್ತು.
ದೇಶದ್ರೋಹ ಪ್ರಕರಣ ಕೈಬಿಟ್ಟ ಪೊಲೀಸರು (ಭೋಪಾಲ): ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಫೈನಲ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಗೆದ್ದಾಗ ಸಂಭ್ರಮಾಚರಣೆ ಮಾಡಿ, ಬಂಧನಕ್ಕೆ ಒಳಗಾದ 15 ಮಂದಿ ವಿರುದ್ಧದ ದೇಶದ್ರೋಹ ಪ್ರಕರಣವನ್ನು ಮಧ್ಯಪ್ರದೇಶದ ಪೊಲೀಸರು ಕೈಬಿಟ್ಟಿದ್ದಾರೆ.
‘ಆರೋಪಿಗಳ ಕೃತ್ಯ ದೇಶದ್ರೋಹದ ಅಡಿ ಬರುವುದಿಲ್ಲ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ಅಲ್ಲದೆ ಅವರ ಮೇಲೆ ಈ ಹಿಂದೆಯೂ ಯಾವುದೇ ಅಪರಾಧ ಪ್ರಕರಣಗಳು ಇರಲಿಲ್ಲ. ಆದ್ದರಿಂದ ದೇಶದ್ರೋಹದ ಆರೋಪ ಕೈಬಿಟ್ಟು, ಕೋಮು ಸೌಹಾರ್ದ ಕದಡಿದ ಆರೋಪ ಹೊರಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಆರ್.ಎಸ್. ಪರಿಹಾರ್ ತಿಳಿಸಿದ್ದಾರೆ.
‘ನಾಲಿಗೆ ಕತ್ತರಿಸಿದರೆ ₹10 ಲಕ್ಷ’ (ಭಿಂಡ್್) (ಮಧ್ಯಪ್ರದೇಶ): ಪಾಕಿಸ್ತಾನದ ಪರ ವಿಜಯೋತ್ಸವ ಆಚರಿಸಿದ ಪ್ರತ್ಯೇಕತಾವಾದಿ ನಾಯಕ ಮಿರ್ವೈಜ್ ಉಮರ್ ಫರೂಕ್ ಅವರ ನಾಲಿಗೆ ಕತ್ತರಿಸಿದವರಿಗೆ ₹10 ಲಕ್ಷ ಬಹುಮಾನ ನೀಡುವುದಾಗಿ ಇಲ್ಲಿನ ಬಿಜೆಪಿ ಮುಖಂಡ ಗಜರಾಜ್ ಜಾಟವ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.