ನವದೆಹಲಿ (ಪಿಟಿಐ): ‘ಒಂದೇ ಶ್ರೇಣಿ ಒಂದೇ ಪಿಂಚಣಿ' (ಒಆರ್ಒಪಿ) ಯೋಜನೆಯಡಿ, ಪ್ರತಿ ವರ್ಷ ಪಿಂಚಣಿ ಪರಿಷ್ಕರಣೆ ಮಾಡಬೇಕು ಎಂದು ಮಾಜಿ ಯೋಧರು ಮುಂದಿಟ್ಟಿರುವ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಸರ್ಕಾರವು ಮಾಜಿ ಯೋಧರಿಗೆ ಗರಿಷ್ಠ ಮಟ್ಟದಲ್ಲಿ ಪಿಂಚಣಿ ನೀಡಲಿದೆ. ‘ಒಆರ್ಒಪಿ’ ಜಾರಿಗೆ ಬದ್ಧವಾಗಿದೆ. ಆದರೆ, ಪ್ರತಿ ವರ್ಷ ಪಿಂಚಣಿ ಪರಿಷ್ಕರಣೆ ಮಾಡಬೇಕು ಎನ್ನುವ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಈ ವ್ಯವಸ್ಥೆ ಪ್ರಪಂಚದ ಬೇರೆ ಯಾವುದೇ ದೇಶಗಳಲ್ಲೂ ಇಲ್ಲ ಎಂದರು.
‘ಒಆರ್ಒಪಿ’ ಎಂದರೆ, ಎಲ್ಲರಿಗೂ ಒಂದೇ ಶ್ರೇಣಿ, ಸಮಾನ ಪಿಂಚಣಿ ಎಂದರ್ಥ. ಆದರೆ, ಕೆಲವರು ಇದನ್ನು ಬೇರೆ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಪ್ರತಿ ತಿಂಗಳು ಅಥವಾ ಪ್ರತಿ ವರ್ಷ ಪಿಂಚಣಿ ಪರಿಷ್ಕರಣೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಸರ್ಕಾರಿ ನೌಕರಿಗೆ ಸಂಬಂಧಿಸಿದಂತೆ 7ನೇ ವೇತನ ಆಯೋಗ ನೀಡಿರುವ ಶಿಫಾರಸುಗಳು ಶೀಘ್ರದಲ್ಲೇ ಜಾರಿಗೆ ಬರಲಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.