ADVERTISEMENT

ಪ್ಲಸ್ ಟು ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿನಿ 'ಮಾಧ್ಯಮಗಳ ವರದಿ'ಯಿಂದ ಮನನೊಂದು ಆತ್ಮಹತ್ಯೆ!

​ಪ್ರಜಾವಾಣಿ ವಾರ್ತೆ
Published 19 ಮೇ 2017, 11:11 IST
Last Updated 19 ಮೇ 2017, 11:11 IST
ಪ್ಲಸ್ ಟು ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿನಿ 'ಮಾಧ್ಯಮಗಳ ವರದಿ'ಯಿಂದ ಮನನೊಂದು ಆತ್ಮಹತ್ಯೆ!
ಪ್ಲಸ್ ಟು ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿನಿ 'ಮಾಧ್ಯಮಗಳ ವರದಿ'ಯಿಂದ ಮನನೊಂದು ಆತ್ಮಹತ್ಯೆ!   

ಕಣ್ಣೂರು (ಕೇರಳ):  ಕಣ್ಣೂರು ಜಿಲ್ಲೆಯ ಮಾಲೂರು ನಿವಾಸಿಯಾದ ರಫ್ಸೀನಾ ಎಂಬ ಬಾಲಕಿ ಪ್ಲಸ್ ಟು ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದು ತೇರ್ಗಡೆ ಹೊಂದಿದ್ದಳು. ಪ್ಲಸ್ ಟು ತರಗತಿಯಲ್ಲಿ 1200 ಅಂಕಗಳಲ್ಲಿ 1180 ಅಂಕಗಳಿಸಿದ್ದ ರಫ್ಸೀನಾಳಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು.

ಶಿವಪುರಂ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದ ರಫ್ಸೀನಾಳ ಶಾಲೆಯ ಅಧ್ಯಾಪಕರು. ವಿದ್ಯಾರ್ಥಿಗಳು ಬುಧವಾರ ಈಕೆಯ ಮನೆಗೆ ಬಂದು ಅಭಿನಂದನೆ ಸಲ್ಲಿಸಿದ್ದರು. ಎಲ್ಲರೂ ಅಭಿನಂದನೆ ಸಲ್ಲಿಸಿ ಹೋದ ನಂತರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ.
ಪ್ಲಸ್ ಟು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದರೂ ರಫ್ಸೀನಾ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬುದು ಎಲ್ಲರ ಪ್ರಶ್ನೆ. 

ಮಾಧ್ಯಮಗಳ ವರದಿ ಆತ್ಮಹತ್ಯೆಗೆ ಕಾರಣ?: ಪ್ಲಸ್ ಟು ಪರೀಕ್ಷೆಯಲ್ಲಿ ರಫ್ಸೀನಾ ಸಾಧನೆ ಬಗ್ಗೆ ಕೊಂಡಾಡಿದ ಸುದ್ದಿ ಪತ್ರಿಕೆಗಳು ಮನೆಯಲ್ಲಿ ಬಡತನವಿದ್ದರೂ ಉತ್ತಮ ಅಂಕಗಳಿಸಿ ರಫ್ಸೀನಾ ಎಂಬ ವಿದ್ಯಾರ್ಥಿನಿ ನಾಡಿಗೆ ಹೆಮ್ಮೆ ತಂದಿದ್ದಾಳೆ ಎಂದು ಬರೆದಿದ್ದವು. ಇಲ್ಲಿನ ನಿಟ್ಟಾರಂಬ್ ಲಕ್ಷಂವೀಡು ಕಾಲೊನಿಯಲ್ಲಿ ಒಂದು ಕೋಣೆಯ ಮನೆಯಲ್ಲಿ ವಾಸಿಸುತ್ತಿದ್ದ  ರಫ್ಸೀನಾಳಿಗೆ ತನ್ನ ಮನೆಯ ಬಡತನವನ್ನೇ ಸುದ್ದಿ ಮಾಧ್ಯಮಗಳು ಹೈಲೈಟ್ ಮಾಡಿದ್ದು ಬೇಸರವಾಗಿತ್ತು.

ADVERTISEMENT

ತನ್ನ ಮನೆಯಲ್ಲಿ ಬಡತನವಿರುವ ವಿಷಯವನ್ನು ರಫ್ಸೀನಾ ತಮ್ಮ ಸಹಪಾಠಿಗಳಲ್ಲಿಯೂ ಹೇಳಿರಲಿಲ್ಲ. ತನ್ನ ಮನೆಯ ಪರಿಸ್ಥಿತಿ ಯಾರಿಗೂ ತಿಳಿಯಬಾರದು ಎಂದು ಈ ಬಾಲಕಿ ಬಯಸಿದ್ದಳು. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಪತ್ರಿಕೆಗಳಲ್ಲಿ ಆ ಸುದ್ದಿ ಪ್ರಕಟವಾದಾಗ ಹೆಚ್ಚಿನವರಿಗೆ ರಫ್ಸೀನಾ ಮನೆಯಲ್ಲಿ ಬಡತನವಿದೆ ಎಂಬ ವಿಷಯ ಗೊತ್ತಾಗಿದೆ. ಅಭಿನಂದನೆ ಸಲ್ಲಿಸಲು ಬಂದ ಗಣ್ಯರು ರಫ್ಸೀನಾಳಿಗೆ ಸಹಾಯ ಭರವಸೆಯನ್ನೂ ನೀಡಿದ್ದರು. ಆದರೆ ರಫ್ಸೀನಾಳಿಗೆ ಮಾಧ್ಯಮಗಳು ತನ್ನ  ಮನೆಯ ಫೋಟೊ ಪ್ರಕಟಿಸಿದ್ದು ಇಷ್ಟವಾಗಿರಲಿಲ್ಲ. ಯಾರ ಅನುಕಂಪವೂ ಬೇಡ ಎಂಬುದು ಈ ಬಾಲಕಿಯ ನಿಲುವಾಗಿತ್ತು.

ರಹಮತ್- ಅಂಬುಟ್ಟಿ ದಂಪತಿಯರ ಪುತ್ರಿ ರಫ್ಸಿನಾ. ಅಮ್ಮ ರಹಮತ್ ಕೂಲಿ ಕೆಲಸ ಮಾಡುತ್ತಿದ್ದಾರೆ. ಬುಧವಾರ ರಹಮತ್ ಅವರು ಕೆಲಸ ಮುಗಿಸಿ ಮನೆಗೆ ಬಂದಾಗ ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈಕೆಯ ಸಹೋದರಿ ಮನ್‍ಸೀನಾ ತಿರುವನಂತಪುರದಲ್ಲಿ ಬಿ ಫಾರ್ಮಾ ವಿದ್ಯಾರ್ಥಿನಿಯಾಗಿದ್ದಾರೆ. ಈಕೆಯ ಸಹೋದರ ಬೆಂಗಳೂರಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಮಾಧ್ಯಮಗಳ ವಿರುದ್ಧ ಟೀಕೆ
ರಫ್ಸೀನಾ ಆತ್ಮಹತ್ಯೆ ಸುದ್ದಿ ಹಬ್ಬುತ್ತಿದ್ದಂತೆ ಸುದ್ದಿ ಮಾಧ್ಯಮಗಳ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಆಕ್ರೋಶ  ವ್ಯಕ್ತವಾಗಿದೆ. 

ಫೇಸ್‍ಬುಕ್ ನಲ್ಲಿ ಪ್ರಕಟವಾದ ಪೋಸ್ಟ್ಗಳು ಹೀಗಿವೆ

ಪ್ರತಿಯೊಂದು ಸುದ್ದಿಯನ್ನು ವೈಭವೀಕರಿಸುವ ಮಾಧ್ಯಮಗಳು ರಫ್ಸೀನಾಳ ಉತ್ತಮ ಸಾಧನೆಯನ್ನು ವರದಿ ಮಾಡುವಾಗ ಆಕೆಯ ಕುಟುಂಬದ ಪರಿಸ್ಥಿತಿಯ ಬಗ್ಗೆಯೇ ಹೆಚ್ಚು ಒತ್ತು ನೀಡಿದ್ದವು. ಯಾರಿಗೂ ತಮ್ಮ ಬಡತನವನ್ನು ಹೊರಗಿನ ಜಗತ್ತಿಗೆ ತಿಳಿಸಲು ಇಷ್ಟವಿರುವುದಿಲ್ಲ. ಹೀಗಿರುವಾಗ ಮಾಧ್ಯಮಗಳು ಆ ಬಾಲಕಿಯ ಮನೆಯ ಮುಂದೆ ಕ್ಯಾಮೆರಾ ನೆಟ್ಟು ಎಲ್ಲವನ್ನೂ ಜಗತ್ತಿಗೆ ತೋರಿಸಿದ್ದು ಅತಿರೇಕದ ಪ್ರವೃತ್ತಿ. ಶ್ರೀಮಂತರಂತೆಯೇ ಬಡವರಿಗೂ ಅವರದ್ದೇ ಆದ ಘನತೆ ಇರುತ್ತದೆ. ಈ ಬಡತನದ ಕತೆ ಸುದ್ದಿಯಾಗಿ ಮಾರಲ್ಪಟ್ಟ ಕಾರಣ ಬಾಲಕಿ ಜೀವ ಕಳೆದುಕೊಂಡಳು. ಇಂಥಾ ಘಟನೆಗಳ ನಡೆದರೂ ಸಮೂಹ ಮಾಧ್ಯಮಗಳು  ಕಣ್ಣು ತೆರೆಯುವುದಿಲ್ಲ. ರಫ್ಸೀನಾಳಿಗೆ ಶ್ರದ್ಧಾಂಜಲಿ.

ಬಡತನವೂ ಖಾಸಗಿ ವಿಷಯವೇ

ಬಡವರ ಜೀವನದ ಬಗ್ಗೆ ಸಾಮಾಜಿಕ ಕಾರ್ಯಕರ್ತರಿಗೆ, ಮಾಧ್ಯಮದವರಿಗೆ ಇರುವ ದೃಷ್ಟಿಕೋನದ ಪ್ರಹಾರಕ್ಕೆ ಗುರಿಯಾದವಳು ರಫ್ಸೀನಾ. ಅನುಕಂಪ ತೋರಿಸುವ ವ್ಯಕ್ತಿಗಳು, ಅವರಿಗೆ ಹೆಚ್ಚಿನ ಪ್ರಚಾರ ನೀಡುವ ಮಾಧ್ಯಮಗಳು ಇಲ್ಲಿ ಕೊಲೆಗಾರರ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಇನ್ನೊಬ್ಬರ ಕೈಗೊಂಬೆಯಾಗಿ ಮಾರ್ಪಡುವ ಮಾಧ್ಯಮ ಪ್ರತಿನಿಧಿಗಳು 'ಬಡತನವೂ ಒಂದು ಖಾಸಗಿ ವಿಷಯ' ಎಂಬುದನ್ನು ಮರೆಯುತ್ತಿದ್ದಾರೆ.

ಬಡಕುಟುಂಬದ ಮಕ್ಕಳು ಜಾಣರಾಗಿರುವುದಿಲ್ಲ. ಗುಡಿಸಲಿನಲ್ಲಿರುವ ಎ ಪ್ಲಸ್ ಅಂಕಗಳನ್ನು ಗಳಿಸಲು ಸಾಧ್ಯವಿಲ್ಲ ಎಂಬ ಪೂರ್ವಗ್ರಹ ಹೊಂದಿದ ಮಾಧ್ಯಮದವರು ಲಕ್ಷಂವೀಡು, ಆದಿವಾಸಿ ಕಾಲೊನಿ ಮಕ್ಕಳು ಉನ್ನತ ವಿಜಯ ಗಳಿಸಿದಾಗ ಆ ಬಗ್ಗೆ ಸಚಿತ್ರ ಲೇಖನ ಬರೆದು ಪ್ರಕಟಿಸುತ್ತವೆ. ಈ ರೀತಿಯ ಸುದ್ದಿ ನೋಡಿದ ಕೂಡಲೇ ಪಬ್ಲಿಸಿಟಿ ಬಯಸುವವರು ಕವರ್. ಕ್ಯಾಮೆರಾ ಹಿಡಿದು ಅಲ್ಲಿ ರೆಡಿಯಾಗುತ್ತಾರೆ. ಇದೆಲ್ಲವೂ ನಮ್ಮ ಸುದ್ದಿಯ ಇಂಪಾಕ್ಟ್ ಎಂದು ಮಾಧ್ಯಮಗಳು ಬೊಬ್ಬಿರಿಯುವಾಗ ಆ ಬಾಲಕಿ ಅಥವಾ ಆ ಬಾಲಕಿಯ ಕುಟುಂಬ ಸಂಪೂರ್ಣವಾಗಿ ಕುಗ್ಗಿ ಹೋಗುವಂಥಾ ಪರಿಸ್ಥಿತಿ ಎದುರಿಸುತ್ತಿರುತ್ತದೆ. ಇದೆಲ್ಲವೂ ಒಳ್ಳೆಯ ಸುದ್ದಿ ಎಂದು ಮಾಧ್ಯಮದವರು ವಾದಿಸಬಹುದು. ಬಡ ಮಕ್ಕಳಿಗೆ ಇದರಿಂದ ನೆರವು ಲಭಿಸಲಿ ಎಂದು ಮಾಧ್ಯಮದವರ ಉದ್ದೇಶವೂ ಆಗಿರಬಹುದು. ಆದರೆ ಎಲ್ಲ ಬಡವರು ಭಿಕ್ಷುಕರಲ್ಲ. ಅವರಿಗೆ ಮಾನ, ಸ್ವಾಭಿಮಾನ ಎಲ್ಲವೂ ಇದೆ ಎಂಬುದನ್ನು ಮರೆಯದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.