ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಲು ಬಿಜೆಪಿ ಮತ್ತು ಶಿವಸೇನಾ ಕೊನೆಗೂ ಸಫಲವಾಗಿವೆ. ಆದರೆ, ಕಾಂಗ್ರೆಸ್ ಮತ್ತು ಎನ್ಸಿಪಿ ನಡುವೆ ಹಗ್ಗಾಜಗ್ಗಾಟ ಇನ್ನೂ ಮುಂದುವರಿದಿದ್ದು, ತಡರಾತ್ರಿ ಬಿಕ್ಕಟ್ಟು ಬಗೆಹರಿಯುವ ವಿಶ್ವಾಸವನ್ನು ಉಭಯ ಪಕ್ಷಗಳು ವ್ಯಕ್ತಪಡಿಸಿವೆ.
ಬಿಜೆಪಿ–ಶಿವಸೇನಾ ನಿಲುವು ಸಡಿಲಿಸಿದ್ದರಿಂದ ಸೀಟು ಹಂಚಿಕೆ ಬಿಕ್ಕಟ್ಟು ಸುಸೂತ್ರವಾಗಿ ಬಗೆಹರಿಯಿತು. ಉಭಯ ಪಕ್ಷಗಳ ನಡುವೆ ಏರ್ಪಟ್ಟಿರುವ ಒಪ್ಪಂದದಂತೆ ಶಿವಸೇನಾ 151 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಬಿಜೆಪಿಗೆ 130 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಉಳಿದ ಏಳು ಕ್ಷೇತ್ರಗಳು ಸಣ್ಣಪುಟ್ಟ ಮಿತ್ರಪಕ್ಷಗಳ ಪಾಲಾಗಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸೋಮವಾರ ಸಂಜೆವರೆಗೂ 119 ಸ್ಥಾನಗಳನ್ನು ಮಾತ್ರ ಬಿಜೆಪಿಗೆ ನೀಡುವುದಾಗಿ ಶಿವಸೇನಾ ಬಿಗಿ ನಿಲುವು ತಳೆದಿತ್ತು. ಮಿತ್ರ ಪಕ್ಷ 135 ಸ್ಥಾನ ಕೊಡಬೇಕು ಎಂದು ಕೇಳಿತ್ತು. ಬಿಜೆಪಿ ಅಧ್ಯಕ್ಷ ಅಮಿತ್ ಷಾ 130 ಕ್ಷೇತ್ರಗಳನ್ನು ತಮಗೆ ನೀಡುವಂತೆ ಹೊಸ ಪ್ರಸ್ತಾವನೆ ಕಳುಹಿಸಿದ್ದರು. ಈ ಪ್ರಸ್ತಾವನೆಗೆ ಶಿವಸೇನಾ ಸಮ್ಮತಿಸಿದೆ. ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ತಾವೇ ಮುಖ್ಯಮಂತ್ರಿ ಎಂದು ಉದ್ಧವ್ ಠಾಕ್ರೆ ಪ್ರತಿಪಾದಿಸಿದ್ದರು. ಆದರೆ, ಮಂಗಳವಾರ ತಾವು ಯಾವುದೇ ಹುದ್ದೆ ಅಲಂಕರಿವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಕೈ ಮೇಲು: ಸೀಟು ಹೊಂದಾಣಿಕೆ ಒಪ್ಪಂದದಲ್ಲಿ ಬಿಜೆಪಿ ಕೈ ಮೇಲಾಗಿದೆ. 130 ಸ್ಥಾನಗಳನ್ನು ಪಡೆಯಲು ಯಶಸ್ವಿಯಾಗಿದೆ. ಅಲ್ಲದೆ, ಸಿ.ಎಂ ಸ್ಥಾನದ ಬೇಡಿಕೆಯಿಂದ ಠಾಕ್ರೆ ಹಿಂದೆ ಸರಿದಿದ್ದಾರೆ. ಸಣ್ಣಪುಟ್ಟ ಮಿತ್ರಪಕ್ಷಗಳಿಗೆ ಕೇವಲ ಏಳು ಸೀಟುಗಳು ಸಿಗಲಿರುವುದು ಅವುಗಳಿಗೆ ಹಿನ್ನಡೆ ಎಂದೇ ಭಾವಿಸಲಾಗಿದೆ. ಈ ಪಕ್ಷಗಳಿಗೆ ವಿಧಾನ ಪರಿಷತ್ ಮತ್ತು ನಿಗಮ– ಮಂಡಳಿಗಳ ಅಧ್ಯಕ್ಷ ಸ್ಥಾನ ಕಲ್ಪಿಸುವ ಮೂಲಕ ನ್ಯಾಯ ಒದಗಿಸುವುದಾಗಿ ಉಭಯ ಪಕ್ಷಗಳು ಭರವಸೆ ನೀಡಿವೆ.
ಕಾಂಗ್ರೆಸ್, ಎನ್ಸಿಪಿ ಸಭೆ: ಕಾಂಗ್ರೆಸ್ ಮತ್ತು ಎನ್ಸಿಪಿ ಮುಖಂಡರು ಸೀಟು ಹಂಚಿಕೆ ಕುರಿತು ಚರ್ಚಿಸಲು ಮಂಗಳವಾರ ಬೆಳಿಗ್ಗೆ ಮುಂಬೈನಲ್ಲಿ ಸಭೆ ಸೇರಿದ್ದರು. ಈ ಸಭೆ ಅಂತಿಮ ತೀರ್ಮಾನಕ್ಕೆ ಬರಲಿಲ್ಲ. ಸಂಜೆ ಪುನಃ ಸಭೆ ಸೇರಿ ಮಾತುಕತೆ ಮುಂದುವರಿಸಲು ತೀರ್ಮಾನಿಸಲಾಯಿತು. ಬಹುತೇಕ ಎನ್ಸಿಪಿ ನಾಯಕರು ಸಂಜೆ ಮಾಲೆಗಾಂವ್ನಲ್ಲಿ ಏರ್ಪಡಿಸಿದ್ದ ಶರದ್ ಪವಾರ್ ಅವರ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರಿಂದ ಮಾತುಕತೆ ಮುಂದುವರಿಯಲಿಲ್ಲ.
‘ಸೀಟು ಹಂಚಿಕೆ ಹೊಂದಾಣಿಕೆ
ಮಾಡಿಕೊಳ್ಳಲು ಔಪಚಾರಿಕವಾಗಿ ಸಭೆ ಸೇರಬೇಕಾದ ಅಗತ್ಯವಿಲ್ಲ. ದೂರವಾಣಿಯಲ್ಲೂ ಮಾತನಾಡಬಹುದು. ಮಾಲೇಗಾಂವ್ನಿಂದ ಎನ್ಸಿಪಿ ಮುಖಂಡ ಪ್ರಫುಲ್ ಪಟೇಲ್ ನೇರವಾಗಿ ನನ್ನ ಮನೆಗೆ ಬಂದರೆ ಅಭ್ಯಂತರವೇನಿಲ್ಲ’ ಎಂದು ಸಿ.ಎಂ ಪೃಥ್ವಿರಾಜ್ ಚೌಹಾಣ್ ಸ್ಪಷ್ಟಪಡಿಸಿದರು. ಎನ್ಸಿಪಿಗೆ 124 ಸ್ಥಾನಗಳನ್ನು ಕೊಡುವುದಾಗಿ ಕಾಂಗ್ರೆಸ್ ಹೇಳಿದೆ. ಆದರೆ, 144 ಕ್ಷೇತ್ರಗಳನ್ನು ಕೊಡುವಂತೆ ಎನ್ಸಿಪಿ ಕೇಳುತ್ತಿದೆ. ಅಂತಿಮವಾಗಿ 130 ಸೀಟುಗಳಿಗೆ ಅದು ಒಪ್ಪಿಕೊಳ್ಳಬಹುದು. ಬಿಜೆಪಿ ಮತ್ತು ಶಿವಸೇನಾ ಮೈತ್ರಿ ಮುಂದುವರಿದಿರುವುರಿಂದ ಕಾಂಗ್ರೆಸ್ ಮತ್ತು ಎನ್ಸಿಪಿ ಹೊಂದಾಣಿಕೆ ಅನಿವಾರ್ಯವಾಗಿದೆ ಎಂದು ಕಾಂಗ್ರೆಸ್ ಮೂಲಗಳು
ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.