ನವದೆಹಲಿ (ಪಿಟಿಐ): ವಿದೇಶಾಂಗ ಕಾರ್ಯದರ್ಶಿ ಬದಲಾವಣೆಯಲ್ಲಿ ಯಾವುದೇ ರಾಜಕೀಯ ಪ್ರಭಾವವಿಲ್ಲ ಎಂದು ಬಿಜೆಪಿ ಕೇಂದ್ರ ಸರ್ಕಾರದ ಕಾರ್ಯವನ್ನು ಸಮರ್ಥಿಸಿಕೊಂಡಿದೆ.
‘ಅಧಿಕಾರಿಗಳ ನಿಯೋಜನೆ, ಬದಲಾವಣೆ ಸರ್ಕಾರದ ಹಕ್ಕು. ಯಾರಿಗೆ ಯಾವ ಸ್ಥಾನ, ಯಾವ ಜವಾಬ್ದಾರಿ ನೀಡಬೇಕು ಎಂಬುದು ಸರ್ಕಾರಕ್ಕೆ ತಿಳಿದಿರುತ್ತದೆ. ಈ ವಿಚಾರದಲ್ಲಿ ಗದ್ದಲ ಮಾಡುವಂಥ ಯಾವುದೇ ಕಾರಣಗಳು ನನಗೆ ಕಾಣುತ್ತಿಲ್ಲ’ ಎಂದು ಬಿಜೆಪಿ ವಕ್ತಾರ ನಳಿನ್ ಕೊಹ್ಲಿ ಹೇಳಿದ್ದಾರೆ.
ಈ ಹಿಂದೆ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಸುಜಾತಾ ಸಿಂಗ್ ಅವರ ಅಧಿಕಾರಾವಧಿ ಇನ್ನೂ ಎಂಟು ತಿಂಗಳಿರುವಾಗಲೇ ಅವರ ಜಾಗಕ್ಕೆ ಜೈಶಂಕರ್ ಅವರನ್ನು ನೇಮಿಸಿ ಕಳೆದ ರಾತ್ರಿ ಸರ್ಕಾರ ಆದೇಶ ಹೊರಡಿಸಿತ್ತು.
‘ವಿದೇಶಾಂಗ ಕಾರ್ಯದರ್ಶಿ ಬದಲಾವಣೆಯ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಕಂಡು ಬಂದಿಲ್ಲ. ಅಧಿಕಾರಿಗಳನ್ನು ಬದಲಾವಣೆ ಮಾಡುವ ಹಕ್ಕು ಸರ್ಕಾರಕ್ಕಿದೆ’ ಎಂದು ಕೊಹ್ಲಿ ತಿಳಿಸಿದ್ದಾರೆ.
‘ಕಾಂಗ್ರೆಸ್ ಪಕ್ಷದ ವಕ್ತಾರರು ಈ ವಿಷಯದಲ್ಲಿ ವಿನಾಕಾರಣ ಗದ್ದಲ ಉಂಟು ಮಾಡುತ್ತಿದ್ದಾರೆ. ಪಕ್ಷದ ನಾಯಕರಿಂದ ಸ್ಫೂರ್ತಿಗೊಂಡು ಅವರು ಹೀಗೆ ಮಾತನಾಡುತ್ತಿದ್ದಾರೆ. ವಿನಾಕಾರಣ ಬೊಬ್ಬೆ ಹೊಡೆಯುತ್ತಿರುವುದು ನಿರರ್ಥಕ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.