ADVERTISEMENT

ಮತ್ತೆ ಸೇನಾ, ಬಿಜೆಪಿ ದೋಸ್ತಿ?

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2014, 19:30 IST
Last Updated 17 ನವೆಂಬರ್ 2014, 19:30 IST

ಮುಂಬೈ (ಪಿಟಿಐ): ಮಹಾರಾಷ್ಟ್ರ­ದಲ್ಲಿ ಬಿಜೆಪಿ ಜತೆಗಿನ ಬಹು­ಕಾಲದ ಮೈತ್ರಿಯನ್ನು ಮುರಿದು ಕೊಂಡು ಸರ್ಕಾರವನ್ನೂ ಸೇರದೆ ದೂರ ಉಳಿದಿದ್ದ ಶಿವಸೇನಾ ಇದೀಗ ಮತ್ತೆ ಬಿಜೆಪಿ ಜತೆಗೆ ಕೈ ಜೋಡಿಸುವ  ಸೂಚನೆಗಳನ್ನು ನೀಡಿದೆ.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಅವರು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರೊಂದಿಗೆ ಮಾತನಾಡಿದ್ದು, ಸರ್ಕಾರ ಸೇರುವಂತೆ ಮನವೊಲಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಜತೆ ಮೈತ್ರಿ ಸಾಧ್ಯತೆಯ ಕುರಿತು ಶಿವಸೇನಾ ಸಹ ಸುಳಿವು ನೀಡಿದೆ.

‘ಹಿಂದುತ್ವದ ತತ್ವದ ಮೇಲೆ ಬಿಜೆಪಿ ಜತೆ ಸೇರಲು ಶಿವಸೇನಾಗೆ ಒಲವಿದೆ. ಆದರೆ ಇದು ಯಾವಾಗ ನಡೆ ಯಲಿದೆ ಎಂಬುದು ನಮಗೆ ಗೊತ್ತಿಲ್ಲ. ಉದ್ಧವ್‌ ಅಂತಿಮ ನಿರ್ಧಾರ ಕೈಗೊಳ್ಳಲಿ­-ದ್ದಾರೆ’ ಎಂದು ಸೇನಾ ಹಿರಿಯ ಮುಖಂಡ ಮನೋಹರ ಜೋಶಿ ಹೇಳಿದ್ದಾರೆ.

ಬಿಕ್ಕಟ್ಟು ಶಮನಕ್ಕೆ ಫಡಣವೀಸ್‌ ಯತ್ನ
ಮುಂಬೈ (ಪಿಟಿಐ): ಶಿವಸೇನಾ ಸ್ಥಾಪಕ ಬಾಳಾ ಠಾಕ್ರೆ ಅವರ ಎರಡನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಭಾಗವಹಿಸುವ ಮೂಲಕ ಎರಡೂ ಪಕ್ಷಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ಶಮನದ ಯತ್ನ ನಡೆಸಿದರು.

ಫಡಣವೀಸ್‌ ಸಂಪುಟದ ಹಲವು ಸಚಿವರು, ಬಿಜೆಪಿಯ ಪ್ರಮುಖ ಮುಖಂಡರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಾಳಾ ಠಾಕ್ರೆ ಹೆಸರಿನಲ್ಲಿ ಅವರ ವ್ಯಕ್ತಿತ್ವಕ್ಕೆ ಸರಿ ಹೊಂದುವಂತಹ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಇದು ಶಿವಸೇನಾದ ಬಹು ಕಾಲದ ಬೇಡಿಕೆಯಾಗಿದೆ. ‘ಬಾಳಾ ಠಾಕ್ರೆ ಅವರು ನಮಗೆ ತಂದೆ ಸಮಾನ. ಅವರ ಅನುಗ್ರಹದಿಂದ ನಾವು ಬಹಳಷ್ಟನ್ನು ಪಡೆದುಕೊಂಡಿದ್ದೇವೆ. ಮಹಾರಾಷ್ಟ್ರದಲ್ಲಿ ಅವರಂತಹ ಇನ್ನೊಬ್ಬ ವ್ಯಕ್ತಿ ಇಲ್ಲ’ ಎಂದು ಫಡಣವೀಸ್‌ ಶ್ಲಾಘಿಸಿದರು.

ಭಾನುವಾರ ನಾಗಪುರದಲ್ಲಿ ಮಾತನಾಡಿದ್ದ ಫಡಣವೀಸ್‌, ಸೇನಾ ಜೊತೆಗೆ ಮಾತುಕತೆಯ ಬಾಗಿಲು ಮುಚ್ಚಿಲ್ಲ ಎಂದು ಹೇಳಿದ್ದರು.
ಶಿವಾಜಿ ಪಾರ್ಕ್‌ನಲ್ಲಿರುವ ಬಾಳಾ ಠಾಕ್ರೆ ಸ್ಮಾರಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರೊಬ್ಬರು ಮಾತ್ರ ಭಾಗವಹಿಸಲಿದ್ದಾರೆ ಎಂದು ಹಿಂದೆ ನಿರ್ಧರಿಸಲಾಗಿತ್ತು. ಆದರೆ ಫಡಣವೀಸ್‌ ಅವರು ಈ ನಿರ್ಧಾರವನ್ನು ಹಠಾತ್ತಾಗಿ ಬದಲಿಸಿ ಕಾರ್ಯಕ್ರಮಕ್ಕೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT