ADVERTISEMENT

ಮಾಜಿ ಕಾರ್ಯದರ್ಶಿಗೆ 2 ವರ್ಷ ಜೈಲು

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ, ನ್ಯಾಯಾಲಯ ಆದೇಶ

ಪಿಟಿಐ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ಮಾಜಿ ಕಾರ್ಯದರ್ಶಿಗೆ 2 ವರ್ಷ ಜೈಲು
ಮಾಜಿ ಕಾರ್ಯದರ್ಶಿಗೆ 2 ವರ್ಷ ಜೈಲು   
ನವದೆಹಲಿ:  ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಎಚ್‌.ಸಿ. ಗುಪ್ತಾ ಮತ್ತು ಸೇವೆಯಲ್ಲಿರುವ ಇಬ್ಬರು ಸರ್ಕಾರಿ ಅಧಿಕಾರಿಗಳಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.
 
ಸಜೆಗೆ ಗುರಿಯಾದ ಇಬ್ಬರು ಅಧಿಕಾರಿಗಳಾದ ಕೆ.ಎಸ್‌. ಕ್ರೋಫ ಮತ್ತು ಕೆ.ಸಿ. ಸಮಾರಿಯಾ ಅವರು ಹಗರಣ ನಡೆದ ಸಂದರ್ಭದಲ್ಲಿ ಕಲ್ಲಿದ್ದಲು ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ನಿರ್ದೇಶಕರಾಗಿದ್ದರು.
 
ವಂಚನೆ, ಕ್ರಿಮಿನಲ್‌ ಮತ್ತು ಭ್ರಷ್ಟಾಚಾರ ನಡೆಸಿರುವ ಆರೋಪದ ಅಡಿಯಲ್ಲಿ ಇವರಿಗೆ ಶಿಕ್ಷೆ ವಿಧಿಸಲಾಗಿದೆ. ಜೈಲು ಶಿಕ್ಷೆಯ ಜೊತೆಗೆ ಮೂವರಿಗೂ ತಲಾ ₹1 ಲಕ್ಷ ದಂಡ ಪಾವತಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.
 
ಈ ಮೂವರು, ಈ ಹಗರಣದಲ್ಲಿ ಶಿಕ್ಷೆಗೆ ಗುರಿಯಾದ ಮೊದಲ  ಸರ್ಕಾರಿ ಅಧಿಕಾರಿಗಳಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಥೆಸ್ಗೊರಾ–ಬಿ ರುದ್ರಪುರಿ ಕಲ್ಲಿದ್ದಲು ನಿಕ್ಷೇಪವನ್ನು ಕಮಲ್‌ ಸ್ಪಾಂಜ್ ಸ್ಟೀಲ್‌ ಅಂಡ್‌ ಪವರ್‌ ಲಿಮಿಟೆಡ್‌ಗೆ (ಕೆಎಸ್‌ಎಸ್‌ಪಿಎಲ್‌)  ಹಂಚಿಕೆ ಮಾಡಿದ ಪ್ರಕರಣ ಇದಾಗಿದೆ.
 
ಒಂದು ಕೋಟಿ ದಂಡ:  ಕೆಎಸ್‌ಎಸ್‌ಪಿಎಲ್‌ಗೆ ನ್ಯಾಯಾಲಯವು ₹1 ಕೋಟಿ ದಂಡ ವಿಧಿಸಿದೆ. ಕಲ್ಲಿದ್ದಲು ಸಚಿವಾಲಯಕ್ಕೆ ಮನವಿ ಸಲ್ಲಿಸುವಾಗ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಪವನ್‌ ಕುಮಾರ್‌ ಅಹ್ಲುವಾಲಿಯಾ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ವಿಶೇಷ ನ್ಯಾಯಾಧೀಶ ಭರತ್‌ ಪರಾಷರ್‌   ಆದೇಶ ಹೊರಡಿಸಿದ್ದಾರೆ.
 
ಈ ಪ್ರಕರಣದಲ್ಲಿ ಗುಪ್ತಾ ಸೇರಿದಂತೆ ಐವರು ತಪ್ಪಿತಸ್ಥರು ಎಂದು ಪರಾಷರ್‌ ಅವರು ಇದೇ 19ರಂದು ಘೋಷಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.