ಪಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರ ಕಡೆಗೆ ಬೆರಳು ಅಥವಾ ಕೈ ತೋರಿಸಿದರೆ ಅದನ್ನು ಕತ್ತರಿಸಲಾಗುವುದು ಎಂದು ಬಿಜೆಪಿಯ ಬಿಹಾರ ಘಟಕದ ಅಧ್ಯಕ್ಷ ನಿತ್ಯಾನಂದ ರಾಯ್ ಅವರು ನೀಡಿರುವ ಹೇಳಿಕೆ ವಿವಾದಕ್ಕೆ ಒಳಗಾಗಿದ್ದು, ಕಾಂಗ್ರೆಸ್, ಆರ್ಜೆಡಿ ಸೇರಿದಂತೆ ವಿರೋಧ ಪಕ್ಷಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಸೋಮವಾರ ಇಲ್ಲಿ ಸಮಾರಂಭವೊಂದರಲ್ಲಿ ಮಾತನಾಡುವಾಗ, ‘ ಮೋದಿ ಅವರು ಬಡವ್ಯಕ್ತಿಯ ಮಗ. ಅವರಿಗೆ ಗೌರವ ನೀಡಬೇಕು. ಅವರ ಕಡೆಗೆ ಬೆರಳು ಅಥವಾ ಕೈ ತೋರಿದರೆ ಅದನ್ನು ಕತ್ತರಿಸಲಾಗುತ್ತದೆ’ ಎಂದು ಹೇಳಿದ್ದರು.
ಈ ಕುರಿತು ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿದ ಅವರು, ‘ನನ್ನ ಭಾವನೆ ವ್ಯಕ್ತಪಡಿಸಲು ನುಡಿಗಟ್ಟು ಬಳಸಿದೆ. ಅದನ್ನು ಅಕ್ಷರಶಃ ಅರ್ಥ ಮಾಡಿಕೊಳ್ಳಬಾರದು. ಆದರೂ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದಲ್ಲಿ, ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ ಮತ್ತು ಅದನ್ನು ಹಿಂಪಡೆಯುತ್ತೇನೆ’ ಎಂದು ತಿಳಿಸಿದ್ದಾರೆ.
‘ತಮಗೇ ಇಲ್ಲದ ಗೌರವದ ಕುರಿತು ಬಿಜೆಪಿ ಹೇಗೆ ಮಾತನಾಡುತ್ತದೆ’ ಎಂದು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಟೀಕಿಸಿದ್ದಾರೆ.
‘ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಹಾಗೂ ಸಂಸದರಾಗಿ, ಈ ರೀತಿಯ ಭಾಷೆ ಬಳಸುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಇದ್ದೇವೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು’ ಎಂದು ಕಾಂಗ್ರೆಸ್ ಹಿರಿಯ ನಾಯಕ ಪ್ರೇಮ್ ಚಂದನ್ ಮಿಶ್ರಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.