ನವದೆಹಲಿ: ಕಾಶ್ಮೀರ ವಿಷಯದಲ್ಲಿ ಮೋದಿ ಸರ್ಕಾರ ಸರಿಯಾದ ಕ್ರಮ ಕೈಗೊಂಡಿಲ್ಲ, ಆರ್ಥಿಕ ವ್ಯವಸ್ಥೆಯೂ ಹದಗೆಡುವಂತೆ ಮಾಡಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಎಐಸಿಸಿ 84ನೇ ಮಹಾ ಅಧಿವೇಶನದ ಎರಡನೇ ದಿನವಾದ ಭಾನುವಾರದಂದು ಕಾಂಗ್ರೆಸ್ ಪಕ್ಷ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.
ಆರು ವರ್ಷಗಳಲ್ಲಿ ರೈತರ ಆದಾಯ ದುಪ್ಪಟ್ಟು ಆಗುವುದೆಂದು ಮೋದಿ ಹೇಳಿದ್ದರು. ಇದೊಂದು ಹೊಸ ರಾಜಕೀಯ ವರಸೆ (ಜುಮ್ಲಾ)ಯಾಗಿದ್ದು, ಇದು ಕಾರ್ಯಗತವಾಗುವಂತದಲ್ಲ ಎಂದು ಸಿಂಗ್ ಹೇಳಿದ್ದಾರೆ.
ನೋಟು ರದ್ದತಿ ಮತ್ತು ಜಿಎಸ್ಟಿಯ ಅನುಷ್ಠಾನದ ಬಗ್ಗೆ ಟೀಕಿಸಿದ ಸಿಂಗ್, ಬಿಜೆಪಿ ನೇತೃತ್ವದ ಸರ್ಕಾರ ಭಾರತದ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ನೋಟು ರದ್ದತಿ ಮತ್ತು ಜಿಎಸ್ಟಿಯನ್ನು ತರಾತುರಿಯಲ್ಲಿ ಅನುಷ್ಠಾನಕ್ಕೆ ತಂದಿದ್ದು ಸಣ್ಣ ಉದ್ಯಮಗಳನ್ನು ನಾಶ ಮಾಡಿತು. ಮೋದಿ ಸರ್ಕಾರ ಕಾಶ್ಮೀರ ವಿವಾದವನ್ನು ಸರಿಯಾಗಿ ನಿಭಾಯಿಸಿಲ್ಲ. ಅಲ್ಲಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಾ ಹೋಗುತ್ತಿದೆ
ಮೋದಿ ನೀಡಿದ ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿದುಕೊಂಡಿದೆ. ಎರಡು ಕೋಟಿ ಉದ್ಯೋಗವಕಾಶಗಳನ್ನು ಸೃಷ್ಟಿಸುವುದಾಗಿ ಅವರು ಹೇಳಿದ್ದರು.ಆದರೆ ಎರಡು ಲಕ್ಷ ಜನರಿಗಾದರೂ ಉದ್ಯೋಗ ಸಿಕ್ಕಿತೇ? ಎಂದು ಸಿಂಗ್ ಪ್ರಶ್ನಿಸಿದ್ದಾರೆ.
ಇದೀಗ ದೇಶದಲ್ಲಿನ ಆರ್ಥಿಕ ಪ್ರಗತಿಗೆ ಮೂಲವಾಗಿದ್ದು ರಾಜೀವ್ ಗಾಂಧಿಯವರ ಸರ್ಕಾರವಾಗಿತ್ತು ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ದೇಶದ ಆರ್ಥಿಕ ವ್ಯವಸ್ಥೆ ಸುಧಾರಣೆಗೊಂಡಿತ್ತು. ನೋಟು ರದ್ದತಿಯಾದ ನಂತರ ಹಳೆಯ ನೋಟುಗಳನ್ನು ಎಣಿಸಲು ಆರ್ ಬಿ ಐಗೆ ಸಾಧ್ಯವಾಗುವುದಿಲ್ಲ ಎಂದಾದರೆ ತಿರುಪತಿಯಲ್ಲಿ ಹಣ ಎಣಿಸುವವರನ್ನು ಕರೆದು ಜತೆಗೆ ಸೇರಿಸಿಕೊಳ್ಳಲಿ. ಅವರು ಇವರಿಗಿಂತ ವೇಗವಾಗಿ ಎಣಿಕೆ ಮಾಡುತ್ತಾರೆ. 14 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದ್ದು ಯುಪಿಎ ಸರ್ಕಾರದ ಸಾಧನೆಯಾಗಿತ್ತು. ಆದರೆ ಬಿಜೆಪಿ ಸರ್ಕಾರ ಜನರನ್ನು ಬಡತನಕ್ಕೆ ದೂಡುತ್ತಿದೆ. ಭಾರತವನ್ನು ಆರ್ಥಿಕ ಕುಸಿತದಿಂದ ರಕ್ಷಿಸಲು ಕಾಂಗ್ರೆಸ್ಗೆ ಮಾತ್ರ ಸಾಧ್ಯ ಎಂದು ಪಿ. ಚಿದಂಬರಂ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.