ಜಮ್ಮು, ನವದೆಹಲಿ (ಪಿಟಿಐ): ಅರ್ನಿಯಾ ಗಡಿ ವಲಯದ ಅಂತರರಾಷ್ಟ್ರೀಯ ಗಡಿಯಲ್ಲಿ ಸೇನೆ ಮತ್ತು ಉಗ್ರರ ಮಧ್ಯೆ ಗುರುವಾರ ನಡೆದ ದಾಳಿಯಲ್ಲಿ ಮೂವರು ಯೋಧರು ಹಾಗೂ ನಾಲ್ವರು ಉಗ್ರರು ಸೇರಿದಂತೆ ಒಟ್ಟು ಹತ್ತು ಮಂದಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಮೂವರು ನಾಗರಿಕ ಸಾವನ್ನಪ್ಪಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ಉಗ್ರರು ಸೇನೆಯ ಸಮವಸ್ತ್ರ ಧರಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಆಯೋಜನೆ ಆಗಿರುವ ಒಂದು ದಿನದ ಮುನ್ನ ಈ ಘಟನೆ ನಡೆದಿದೆ. ವಿಧಾನಸಭೆ ಚುನಾವಣೆ ಕಾರಣ ಪ್ರಧಾನಿ ಮೋದಿ ಶುಕ್ರವಾರ ಉದಂಪುರ್ (ಘಟನಾ ಸ್ಥಳದಿಂದ ನೂರು ಕಿಲೋ ಮೀಟರ್ ದೂರದಲ್ಲಿದೆ) ಮತ್ತು ಪೂಂಚ್ ಜಿಲ್ಲೆಯಲ್ಲಿ ಚುನಾವಣಾ ರ್್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ರಜೊರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಒಳನುಸುಳಲು ಪ್ರಯತ್ನಿಸುತ್ತಿದ್ದ ಉಗ್ರರನ್ನು ಸೇನೆ ಹಿಮ್ಮೆಟ್ಟಿಸಿದ್ದು, ಕೆಲ ಶಂಕಿತ ಉಗ್ರರರನ್ನು ಬಂಧಿಸಿದೆ. ಬಂಧಿತ ಶಂಕಿತ ಉಗ್ರನೊಬ್ಬನಿಂದ ಎಕೆ47 ಬಂದೂಕು, 30 ಮದ್ದುಗುಂಡುಗಳು, ಪಿಸ್ತೂಲ್ ಮತ್ತು ₨8100 ಪಾಕಿಸ್ತಾನಿ ನೋಟುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
‘ಅರ್ನಿಯಾ ವಲಯದಲ್ಲಿ ಸೇನೆ ಮತ್ತು ಉಗ್ರರ ಮಧ್ಯೆ ನಡೆದ ಕಾಳಗದಲ್ಲಿ ಮೂವರು ಯೋಧರು ಮತ್ತು ಉಗ್ರರು ಸಾವನ್ನಪ್ಪಿದ್ದಾರೆ’ ಎಂದು ನವದೆಹಲಿಯಲ್ಲಿರುವ ಸೇನೆಯ ಮೂಲಗಳು ತಿಳಿಸಿವೆ.
‘ಅರ್ನಿಯಾ ವಲಯದ ಪಿಂಡಿ ಖಾಟ್ಟರ್ ವಲಯದಲ್ಲಿರುವ 92ಇನ್ಫೆಂಟ್ರಿ ಬ್ರಿಗೇಡ್ಗೆ ಸೇರಿದ ಬಂಕರ್ ಸೇನೆ ತೆರವು ಮಾಡಿತ್ತು. ಈ ಬಂಕರ್ ಅನ್ನು ಉಗ್ರರು ವಶಕ್ಕೆ ತೆಗೆದುಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಉಗ್ರರು ಸೇನೆ ಬಂಕರ್ ವಶಪಡಿಸಿಕೊಳ್ಳುವುದಕ್ಕೂ ಮುನ್ನ ಸೇತುವೆ ಸಮೀಪ ನಿಂತು ಬಟ್ಟೆ ಬದಲಾಯಿಸಿ ಸೇನೆಯ ಸಮವಸ್ತ್ರ ಧರಿಸಿದ್ದರು ಎಂದು ಗುಪ್ತಚರ ಇಲಾಖೆ ವರದಿಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.