ಶಿಕಾರಿಪುರ: ‘ನರೇಂದ್ರ ಮೋದಿ ಸಂಸತ್ತಿನಲ್ಲಿ ಮಾಡಿದ ಭಾಷಣದ ಪ್ರಭಾವದಿಂದ ನಾನು ಅವರಿಗೆ ಪತ್ರ ಬರೆದಿದ್ದೇನೆಯೇ ಹೊರತು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಕೋರಿ ಬರೆದಿಲ್ಲ. ರಾಜನಾಥ್ಸಿಂಗ್ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ಅವರು ನೀಡುವ ಸಲಹೆಯನ್ನು ಶಿರಸಾವಹಿಸಿ ಸ್ವೀಕರಿಸುತ್ತೇನೆ’ ಎಂದು ಸಂಸತ್ ಸದಸ್ಯ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಇಲ್ಲಿ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮೋದಿ ಅವರಿಗೆ ಯಡಿಯೂರಪ್ಪ ಪತ್ರ ಬರೆದಿದ್ದು ತಪ್ಪು ಎಂಬ ರಾಜನಾಥ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದರು. `‘ಮೋದಿ ಸಂಸತ್ತಿನಲ್ಲಿ ಮಾಡಿದ ಭಾಷಣದಿಂದ ಪ್ರಭಾವಿತನಾಗಿ ಸಚಿವ ಸ್ಥಾನ ಬೇಡ ಎಂದು ನಾನು ಪತ್ರ ಬರೆದಿದ್ದೇನೆ, ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಆ ಪತ್ರ ಬರೆದಿಲ್ಲ.
ಸಂಸತ್ ಸದಸ್ಯನಾಗಿಯೇ ಪಕ್ಷ ಸಂಘಟನೆಗೆ ನಾನು ಸಿದ್ದನಿದ್ದೇನೆ’ ಎಂದರು. ‘ನಾನು ಬರೆದಿರುವ ಪತ್ರದ ಬಗ್ಗೆ ರಾಜನಾಥ ಸಿಂಗ್ ಅವರಿಗೆ ತಪ್ಪು ಗ್ರಹಿಕೆ ಆಗಿದೆ. ಮೇ 26ರಂದು ದೆಹಲಿಯಲ್ಲಿ ಸಿಂಗ್ ಭೇಟಿ ಮಾಡಿ ಮೋದಿಗೆ ಪತ್ರ ಬರೆದಿರುವ ಬಗ್ಗೆ ವಾಸ್ತವ ಸ್ಥಿತಿ ತಿಳಿಸುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.