ನವದೆಹಲಿ: ಸಂಯುಕ್ತ ಜನತಾ ದಳದಿಂದ (ಜೆಡಿಯು)ಬಂಡಾಯವೆದ್ದಿರುವ ಶರದ್ ಯಾದವ್ ನೇತೃತ್ವದ ಗುಂಪು ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದು, ಮಾನ್ಯತೆಗಾಗಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಿದೆ.
‘ಎರಡು ದಿನದೊಳಗೆ ಆಯೋಗಕ್ಕೆ ಅರ್ಜಿ ಸಲ್ಲಿಸಲಿದ್ದೇವೆ. ಸಮಾಜವಾದಿ ಜನತಾ ದಳ ಅಥವಾ ಲೋಕತಾಂತ್ರಿಕ ಜನತಾ ದಳ ಎಂಬ ಹೆಸರಿಗೆ ಮಾನ್ಯತೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗುವುದು’ ಎಂದು ಯಾದವ್ ಅವರ ಆಪ್ತ ಹಾಗೂ ಜೆಡಿಯು ಮಾಜಿ ಪ್ರಧಾನ ಕಾರ್ಯದರ್ಶಿ ಅರುಣಕುಮಾರ್ ಶ್ರೀವಾಸ್ತವ್ ಹೇಳಿದ್ದಾರೆ.
ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆಯ ಚುನಾವಣಾ ಫಲಿತಾಂಶದ ನಂತರ ಸಮಾವೇಶ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಳೆದ ತಿಂಗಳು ಚುನಾವಣಾ ಆಯೋಗವು ಯಾದವ್ ನೇತೃತ್ವದ ಗುಂಪಿನ ಕೋರಿಕೆಯನ್ನು ತಿರಸ್ಕರಿಸಿತ್ತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಗುಂಪು ನಿಜವಾದ ಜೆಡಿಯು ಎಂದು ಪಕ್ಷದ ಚಿಹ್ನೆ ‘ಬಾಣ’ ವನ್ನು ಸಹ ಇದೇ ಗುಂಪಿಗೆ ನೀಡಿತ್ತು. ಚುನಾವಣಾ ಆಯೋಗದ ತೀರ್ಮಾನವನ್ನು ಪ್ರಶ್ನಿಸಿ, ಯಾದವ್ ನೇತೃತ್ವದ ಗುಂಪು ಕೋರ್ಟ್ ಮೆಟ್ಟಿಲೇರಿದೆ.
ಗುಜರಾತ್ ಚುನಾವಣೆ ನಂತರ ಹೊಸ ಪಕ್ಷ ಸ್ಥಾಪಿಸುವುದಾಗಿ ಯಾದವ್ ನೇತೃತ್ವದ ಗುಂಪು ಈ ಮೊದಲೇ ಪ್ರಕಟಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.