ಕೋಲ್ಕತ್ತ (ಪಿಟಿಐ): ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ಅವರ ನಡುವಣ ವಾಕ್ಸಮರದ ಮಧ್ಯೆಯೇ ಈ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡುವಂತೆ ಮಮತಾ ಅವರಿಗೆ ಕಾಂಗ್ರೆಸ್ ಸವಾಲು ಹಾಕಿದೆ.
ಮಮತಾ ಅವರಿಗೆ ದಿಟ್ಟತನವಿದ್ದರೆ ಲಕ್ಷಾಂತರ ಬಡವರಿಗೆ ವಂಚನೆ ಎಸಗಿರುವ ಈ ಹಗರಣದ ಬಗ್ಗೆ ಸಿಬಿಐ ತನಿಖೆ ನಡೆಸಲು ಅವರು ಅನುಮತಿ ನೀಡಬೇಕು; ಈ ಸಂಬಂಧದ ಎಲ್ಲಾ ಲೆಕ್ಕಪತ್ರಗಳು ಹಾಗೂ ಹಣಕಾಸು ವ್ಯವಹಾರಗಳ ಕುರಿತು ತನಿಖೆ ನಡೆಸಬೇಕು ಎಂದು ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧರಿ ಮಂಗಳವಾರ ಒತ್ತಾಯಿಸಿದ್ದಾರೆ.
ಮಮತಾ ಅವರ ತೃಣಮೂಲ ಪಕ್ಷವು ಬಿಜೆಪಿ ಜತೆ ಒಳಗೊಳಗೇ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಈ ರೀತಿಯ ಅಪವಿತ್ರ ಮೈತ್ರಿ ಇಲ್ಲದೇ ಹೋಗಿದ್ದರೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಇಷ್ಟರ ಮಟ್ಟಿಗೆ ಬಲ ಬರುತ್ತಿರಲಿಲ್ಲ ಎಂದು ಟೀಕಿಸಿದ್ದಾರೆ.
ಶಾರದಾ ಹಗರಣ ಸಂಬಂಧ ಬಂಧನಕ್ಕೊಳಗಾಗಿ ಟಿಎಂಸಿಯಿಂದ ಅಮಾನತುಗೊಂಡಿರುವ ರಾಜ್ಯಸಭಾ ಸದಸ್ಯ ಕುನಾಲ್ ಘೋಷ್ ಮಾತನಾಡಿ, ಮಮತಾ ಬ್ಯಾನರ್ಜಿ ಅವರು ಅಪರಾಧಿಗಳನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ; ಈ ಸಂಬಂಧ ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಮದನ್ ಮಿಶ್ರಾ ಅವರಿಗೂ ಸಮನ್್ಸ ಜಾರಿಯಾಗಬೇಕಿತ್ತು ಎಂದಿದ್ದಾರೆ.
ಮಾನಹಾನಿ ಖಟ್ಲೆ
ಮಮತಾ ಬ್ಯಾನರ್ಜಿ ಅವರ ವರ್ಣಚಿತ್ರವನ್ನು 1.8 ಕೋಟಿ ರೂಪಾಯಿಗೆ ಖರೀದಿಸಿದವರು ಯಾರೆಂಬುದನ್ನು ಬಹಿರಂಗಗೊಳಿಸುವಂತೆ ಆಗ್ರಹಿಸಿರುವ ನರೇಂದ್ರ ಮೋದಿ ಅವರ ವಿರುದ್ಧ ಮಾನಹಾನಿ ಖಟ್ಲೆ ಹೂಡುವುದಾಗಿ ಟಿಎಂಸಿ ಹೇಳುತ್ತಿದ್ದಂತೆಯೇ ಬಿಜೆಪಿ ಕೂಡ ತಿರುಗೇಟು ನೀಡಿ, ಟಿಎಂಸಿ ವಿರುದ್ಧ ಮಾನಹಾನಿ ಅರ್ಜಿ ದಾಖಲಿಸಲು ತಾನೂ ಸಿದ್ಧ ಎಂದು ಹೇಳಿದೆ.
ಮಮತಾ ಅವರ ವರ್ಣಚಿತ್ರಗಳ ಖರೀದಿದಾರರು ಹಾಗೂ ಶಾರದಾ ಚಿಟ್ ಫಂಡ್ ಹಗರಣದ ಬಗ್ಗೆ ತೃಣಮೂಲ ಸರ್ಕಾರವು ಶ್ವೇತಪತ್ರ ಹೊರಡಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ರಾಹುಲ್ ಸಿನ್ಹಾ ಒತ್ತಾಯಿಸಿದ್ದಾರೆ.
ಮತ್ತೊಂದೆಡೆ, ಮಮತಾ ಅವರ ವರ್ಣಚಿತ್ರ ಖರೀದಿಸಿರುವ ಶಾರದಾ ಚಿಟ್ ಫಂಡ್ ಹಗರಣದ ಸಂಚುಕೋರ ಸುದೀಪ್ತ ಸೆನ್ ಮೇಲೆ, ಈ ವಿಷಯವನ್ನು ಬಹಿರಂಗಗೊಳಿಸದಂತೆ ಒತ್ತಡ ಹೇರಲಾಗಿದೆ ಎಂದು ಸಿಪಿಎಂ ದೂರಿದೆ.
ಮಮತಾ ಅವರು ತಮ್ಮ ಪಕ್ಷದ ಚುನಾವಣಾ ನಿಧಿಗಾಗಿ ಹೇಗೆ ಹಣ ಹೊಂದಿಸುತ್ತಿದ್ದಾರೆ ಎಂಬುದನ್ನೂ ಬಹಿರಂಗ ಮಾಡಬೇಕು ಎಂದು ಧ್ವನಿ ಎತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.