ಮುಂಬೈ (ಪಿಟಿಐ): ಸಂವಿಧಾನದ ಪೂರ್ವಪೀಠಿಕೆಯಲ್ಲಿನ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ಶಾಶ್ವತವಾಗಿ ತೆಗೆದು ಹಾಕುವಂತೆ ಶಿವಸೇನೆ ಒತ್ತಾಯಿಸಿದೆ.
ವಾರ್ತಾ ಮತ್ತು ಪ್ರಸಾರ ಇಲಾಖೆಯು ಗಣರಾಜ್ಯೋತ್ಸವ ದಿನದಂದು ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ 42ನೇ ತಿದ್ದುಪಡಿಗೂ ಮುಂಚಿನ, ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳು ಇಲ್ಲದ ಸಂವಿಧಾನದ ಪೂರ್ವ ಪೀಠಿಕೆಯ ಚಿತ್ರವನ್ನು ಬಳಸಿದೆ. ಇದನ್ನೇ ಮುಂದು ಮಾಡಿಕೊಂಡು ಶಿವಸೇನೆ ಸಂವಿಧಾನದಿಂದ ಈ ಪದಗಳನ್ನು ತೆಗೆಯುವಂತೆ ಒತ್ತಾಯಿಸಿದೆ.
‘ವಾರ್ತಾ ಇಲಾಖೆಯು ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ತೆಗೆದು ಹಾಕಿರುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಇದು ಭಾರತೀಯರ ಭಾವನೆಗಳನ್ನು ಗೌರವಿಸಿದಂತಾಗಿದೆ. ಈಗ ಕಣ್ತಪ್ಪಿನಿಂದಲೇ ಈ ಪದಗಳು ಬಿಟ್ಟು ಹೋಗಿರಬಹುದು, ಆದರೆ ಈ ಪದಗಳನ್ನು ಸರ್ಕಾರ ಶಾಶ್ವತವಾಗಿ ತೆಗೆದು ಹಾಕಬೇಕು’ ಎಂದು ಶಿವಸೇನೆಯ ಸಂಸದ ಸಂಜಯ್ ರಾವುತ್ ಆಗ್ರಹಿಸಿದ್ದಾರೆ.
‘ಹಿಂದೆ ಧರ್ಮದ ಆಧಾರದ ಮೇಲೆಯೇ ರಾಷ್ಟ್ರ ವಿಭಜನೆಯಾಗಿದೆ. ಮುಸ್ಲಿಮರಿಗಾಗಿ ಪಾಕಿಸ್ತಾನ ಮತ್ತು ನಮಗಾಗಿ ಹಿಂದೂ ರಾಷ್ಟ್ರ ಎಂಬುದು ದೇಶದ ಹಿರಿಯರ ವಾದವೂ ಆಗಿತ್ತು. ಸಂವಿಧಾನ ತಿದ್ದುಪಡಿ ಮಾಡಿ ಆ ಪದಗಳನ್ನು ಸೇರಿಸಿದ ಮಾತ್ರಕ್ಕೆ ನಮ್ಮದು ಜಾತ್ಯತೀತ ರಾಷ್ಟ್ರವಾಗುವುದಿಲ್ಲ’ ಎಂದು ರಾವುತ್ ಹೇಳಿದ್ದಾರೆ.
‘ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣಕ್ಕಾಗಿ ಈ ದೇಶದ ಹಿಂದೂಗಳನ್ನು ನಿರಂತರವಾಗಿ ಅವಮಾನಿಸುತ್ತ ಬರಲಾಗುತ್ತಿದೆ’ ಎಂದು ರಾವುತ್ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.