ಭುವನೇಶ್ವರ/ವಿಜಯವಾಡ: ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ತಿತ್ಲಿ ಚಂಡಮಾರುತದ ಆರ್ಭಟ ಜೋರಾಗಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ.
6 ರಿಂದ 7 ಸಾವಿರ ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ 5 ಲಕ್ಷ ಮಂದಿ ಕತ್ತಲಲ್ಲಿ ಮುಳುಗಿದ್ದಾರೆ. ನೂರಾರು ಮರಗಳು ಧರೆಗುರುಳಿದಿವೆ ಎಂದು ಶ್ರೀಕಾಕುಲಂನ ಮುಖ್ಯ ಜಿಲ್ಲಾ ಆಡಳಿತಾಧಿಕಾರಿ ಕೆ. ಧನಂಜಯ ರೆಡ್ಡಿ ತಿಳಿಸಿದ್ದಾರೆ.
ಶ್ರೀಕಾಕುಲಂನಲ್ಲಿ ಭೂಕುಸಿತ ಸಂಭವಿಸಿದೆ. ರಸ್ತೆ ಸಂಚಾರ ಕಡಿತಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ತಿತ್ಲಿ ಚಂಮಾರುತದಿಂದ ಒಡಿಶಾದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಸಾಕಷ್ಟು ಮನೆಗಳು ನಾಶವಾಗಿವೆ. ಈಗಾಗಲೇ ಸಂಭವಿಸಿರುವ ಹಾನಿಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬಿದ್ದ ಮರಗಳನ್ನು ತೆರವುಗೊಳಿಸುವ ಮೂಲಕ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ವಿಶೇಷ ಪರಿಹಾರ ಕಮಿಷನರ್ ಬಿಷ್ಣುಪಾದ ಸೇತಿ ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ
ಇನ್ನು 24 ಗಂಟೆಗಳಲ್ಲಿ ಒಡಿಶಾದ ಕೆಲವು ಭಾಗಗಳಲ್ಲಿ ವರುಣನ ಅಬ್ಬರ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಕಛೇರಿ ಮುನ್ನೆಚ್ಚರಿಕೆ ನೀಡಿದೆ.
ರಾಜ್ಯದ ಪೂರ್ವ ಭಾಗಗಳನ್ನು ಹೊರತುಪಡಿಸಿ ಬೇರೆಡೆ ದಿನಪೂರ್ತಿ ಮಳೆಯಾಗಲಿದೆ. ಪ್ರವಾಹ ಎದುರಾಗುವ ಬಗ್ಗೆ ತಿಳಿದಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಆದಿತ್ಯ ಪ್ರಸಾದ್ ಪಧಿ ತಿಳಿಸಿದ್ದಾರೆ.
ಇನ್ನು 12 ಗಂಟೆಗಳಲ್ಲಿ ತಿತ್ಲಿ ಚಂಡಮಾರುತವು ವಾಯವ್ಯ ದಿಕ್ಕಿನೆಡೆಗೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇವನ್ನೂ ಓದಿ...
ಒಡಿಶಾ ಕರಾವಳಿಗೆ ಅಪ್ಪಳಿಸಿತು ಅತ್ಯುಗ್ರ ತಿತ್ಲಿ ಚಂಡಮಾರುತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.