ಮಡಿಕೇರಿ: ‘ಅಧಿಕಾರಿಗಳ ಕಿರುಕುಳವೇ ಸಾವಿಗೆ ಕಾರಣ’ ಎಂದು ಡೆತ್ನೋಟ್ ಬರೆದು ಅರಣ್ಯ ಇಲಾಖೆ ಚಾಲಕ ಗುರುವಾರ ಇಲ್ಲಿನ ಅರಣ್ಯ ಭವನದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಸನ ಜಿಲ್ಲೆ, ಸಕಲೇಶಪುರದ ಅರಣ್ಯ ಸಂಶೋಧನಾ ಕೇಂದ್ರದ ವಾಹನ ಚಾಲಕ ಎಚ್.ಎಸ್.ಮಂಜುನಾಥ್ (55) ಮೃತರು. ಸಕಲೇಶಪುರ ತಾಲ್ಲೂಕಿನ ಬಾಣಿಗೇರಿ ನಿವಾಸಿ.
ಮಡಿಕೇರಿ ಅರಣ್ಯ ಸಂಶೋಧನಾ ಕೇಂದ್ರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಪೂರ್ಣಿಮಾ ಅವರು ಸಕಲೇಶಪುರ ಕೇಂದ್ರದ ಪ್ರಭಾರ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರನ್ನು ಇಲಾಖೆ ವಾಹನದಲ್ಲಿ ಮನೆಗೆ ಬಿಡಲು ಬುಧವಾರ ರಾತ್ರಿ ನಗರಕ್ಕೆ ಬಂದಿದ್ದರು.
‘ಅರಣ್ಯ ಭವನಕ್ಕೆ ಬಂದು ಕಾವಲುಗಾರರಾದ ವೈ.ಎ.ವಾಸುದೇವ್ ಹಾಗೂ ದಯಾನಂದ್ ಅವರ ಜೊತೆಗೆ ಉಳಿದುಕೊಂಡಿದ್ದರು. ಇಬ್ಬರೂ ಬೆಳಿಗ್ಗೆ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಮರ ಕಳವು ಪ್ರಕರಣದಲ್ಲಿ ಸಕಲೇಶಪುರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ವಲಯ ಅರಣ್ಯಾಧಿಕಾರಿ ದಯಾನಂದ್, ಚಾಲಕ ಸುರೇಶ್ ಕಿರುಕುಳ ನೀಡುತ್ತಿದ್ದರು. ನನ್ನ ಸಾವಿಗೆ ಈ ಮೂವರೇ ಹೊಣೆ’ ಎಂದು ಡೆತ್ನೋಟ್ನಲ್ಲಿ ಬರೆದಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.