ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಪಿ ನೇತೃತ್ವದ ತಂಡವೊಂದು ಮಂಗಳವಾರ ಪತ್ರಕರ್ತ ಅಗ್ನಿಶ್ರೀಧರ್ ಮನೆಗೆ ತೆರಳಿ ಮಾಹಿತಿ ಪಡೆದುಕೊಂಡಿತು.
ವಿಚಾರವಾದಿಗಳ ವೇದಿಕೆ ಕರ್ನಾಟಕ (ವಿವೇಕ) ವತಿಯಿಂದ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಪೆರಿಯಾರ್ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅಗ್ನಿಶ್ರೀಧರ್, ‘ಎಂ.ಎಂ.ಕಲಬುರ್ಗಿ, ಗೌರಿ ಹತ್ಯೆ ಮಾಡಿದವರು ತಲೆಮರೆಸಿಕೊಳ್ಳುವ ಹಂತಕರಲ್ಲ. ತರಬೇತಿ ಪಡೆದವರೇ ಈ ಹತ್ಯೆಗಳನ್ನು ನಡೆಸಿದ್ದಾರೆ. ಹಿಂಸೆಯ ಜಗತ್ತನ್ನು ಹತ್ತಿರದಿಂದ ಕಂಡ ನನ್ನಂತಹವರಿಗೆ ಇದು ಗೊತ್ತಾಗುತ್ತದೆ’ ಎಂದು ಹೇಳಿದ್ದರು.
‘ಅಗ್ನಿಶ್ರೀಧರ್ ಅಪರಾಧ ಜಗತ್ತನ್ನು ಬಲ್ಲವರು. ಗೌರಿ ಹತ್ಯೆಯಲ್ಲಿರುವ ಸೂಕ್ಷ್ಮತೆ ಗೊತ್ತಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಹೀಗಾಗಿ, ಅವರನ್ನು ಭೇಟಿಯಾಗಿ ಹೆಚ್ಚಿನ ಮಾಹಿತಿ ಪಡೆದಿದ್ದೇವೆ. ತನಿಖೆಗೆ ಪೂರಕವಾಗುವಂಥ ಕೆಲವು ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ’ ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಮುತ್ತಪ್ಪರೈ ವಿಚಾರಣೆ: ಗೌರಿ ಲಂಕೇಶ್ ವಿರುದ್ಧ ಹಿಂದೆ ಮಾನನಷ್ಟ ಪ್ರಕರಣ ದಾಖಲಿಸಿದ್ದ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪರೈ ಹಾಗೂ ಕರುನಾಡು ಸೇನೆಯ ಗೌರವಾಧ್ಯಕ್ಷ ಪಟ್ಟಣಗೆರೆ ಜಯಣ್ಣ ಅವರನ್ನೂ ಎಸ್ಐಟಿ ವಿಚಾರಣೆ ನಡೆಸಿದೆ.
‘2003ರಲ್ಲಿ ನನ್ನ ವಿರುದ್ಧ ಲೇಖನ ಬರೆದಿದ್ದಕ್ಕೆ ಗೌರಿ ಲಂಕೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೆ. ಆ ನಂತರ ನನಗೂ ಅವರಿಗೂ ಸಂಪರ್ಕವಿರಲಿಲ್ಲ. ನನ್ನ ತಾಯಿ ನಿಧನ ಹೊಂದಿದ್ದರಿಂದ ಸೆ.5ರಂದು ನಾನು ಮಂಗಳೂರಿನಲ್ಲಿದ್ದೆ. ಅದೇ ದಿನ ಗೌರಿ ಅವರ ಹತ್ಯೆ ನಡೆದಿತ್ತು’ ಎಂದು ಮುತ್ತಪ್ಪರೈ ಹೇಳಿಕೆ ಕೊಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.