ADVERTISEMENT

ಒಂದೇ ಕೊಠಡಿಯಲ್ಲಿ ಇಬ್ಬರು ಕುಲಸಚಿವರು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2014, 19:30 IST
Last Updated 27 ಸೆಪ್ಟೆಂಬರ್ 2014, 19:30 IST

ಧಾರವಾಡ: ಕರ್ನಾಟಕ ವಿಶ್ವವಿದ್ಯಾ­ಲ­ಯದ ಕುಲಸಚಿವೆ ಪ್ರೊ.ಚಂದ್ರಮಾ ಕಣಗಲಿ ಅವರನ್ನು ಸಂಗೀತ ವಿಶ್ವ­ವಿದ್ಯಾಲಯಕ್ಕೆ ವರ್ಗಾವಣೆ ಮಾಡಿ ಹೊರಡಿಸಿದ್ದ ಸರ್ಕಾರದ ಆದೇಶವನ್ನು ಇಲ್ಲಿನ ಹೈಕೋರ್ಟ್‌ ಪೀಠ ಶುಕ್ರವಾರ ಅನೂರ್ಜಿತ­ಗೊಳಿಸಿ­ದ್ದರಿಂದ ಶನಿವಾರ ತಮಗೆ ಕುಲಸಚಿವ ಸ್ಥಾನದ ಅಧಿಕಾರ ವಹಿಸಿಕೊಡುವಂತೆ ಕುಲಪತಿ ಪ್ರೊ.­ಎಚ್‌.­ಬಿ.ವಾಲೀಕಾರ ಹಾಗೂ ಸದ್ಯದ ಕುಲಸಚಿವ ಪ್ರೊ.ವೈ.­ಎಸ್‌.ಸಿದ್ದೇ­ಗೌಡ­ರಿಗೆ ಸ್ವತಃ ಪ್ರೊ. ಚಂದ್ರಮಾ ಮನವಿ ಸಲ್ಲಿಸಿದರು. ಜತೆಗೆ ಕೆಲ ಕಾಲ ಒಂದೇ ಕಚೇರಿಯಲ್ಲಿ ಇಬ್ಬರು ಕುಲಸಚಿವರು ಕುಳಿತು ಕಾರ್ಯನಿರ್ವ­ಹಿಸಿದ ಪ್ರಸಂಗವೂ ನಡೆಯಿತು.

ಡಾ. ವಾಲೀಕಾರ ಅವರಿಗೆಬರೆದಿ­ರುವ ಪತ್ರದಲ್ಲಿ, ‘ಕಣಗಲಿ ಅವರು ಕವಿವಿ ಕುಲಸಚಿವರಾಗಿಯೇ ಮುಂದು­ವರಿ­ಯಬೇಕು ಹಾಗೂ ಪ್ರೊ.ಸಿದ್ದೇಗೌಡ ಮತ್ತೆ ಮೈಸೂರು ವಿವಿಗೆ ವಾಪಸ್ಸಾ­ಗ­ಬೇಕು ಎಂದು ಧಾರವಾಡ ಹೈಕೋರ್ಟ್‌ ಆದೇಶಿಸಿದೆ. ಆದ್ದರಿಂದ ಕವಿವಿ ಕುಲ­ಸಚಿವ ಸ್ಥಾನದ ಅಧಿಕಾರವನ್ನು ನನಗೆ ವಹಿಸಿಕೊಡಬೇಕು’ ಎಂದು  ಪ್ರೊ. ಚಂದ್ರಮಾ ಮನವಿ ಮಾಡಿದ್ದಾರೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಪ್ರೊ. ಸಿದ್ದೇಗೌಡ, ‘ನನಗೆ ಹೈಕೋರ್ಟ್‌­ನಿಂದಾ­ಗಲಿ ಅಥವಾ ಸರ್ಕಾರ­ದಿಂದಾ­ಗಲಿ ಸ್ಪಷ್ಟ ಆದೇಶ ಬಂದಿಲ್ಲ.  ನ್ಯಾಯಾಲಯದಿಂದ ಸ್ಪಷ್ಟ ಆದೇಶ ಬಂದಲ್ಲಿ ಅದನ್ನು ಗೌರವಿಸಿ ನಾನು ಈಗಲೇ ಅಧಿಕಾರ ಹಸ್ತಾಂತರಿಸು­ತ್ತೇನೆ. ಹೈಕೋರ್ಟ್‌ ತನ್ನ ಆದೇಶವನ್ನು ಸರ್ಕಾರಕ್ಕೆ ಮಾಡಿದೆಯೋ ಅಥವಾ ವಿಶ್ವವಿದ್ಯಾಲಯಕ್ಕೆ ಮಾಡಿದೆಯೋ ಎಂಬು­ದನ್ನು ನೋಡಬೇಕು. ಸರ್ಕಾರವೇ ನನ್ನನ್ನು ಇಲ್ಲಿಗೆ ನೇಮಕ ಮಾಡಿದೆ. ಮತ್ತೆ ಎಲ್ಲಿಗೆ ವರ್ಗಾವಣೆ ಮಾಡುತ್ತ­ದೆಯೋ ಅಲ್ಲಿಗೆ ನಾನು ಸಂತೋಷ­ದಿಂದ ಹೋಗುತ್ತೇನೆ. ಇದನ್ನು ಪ್ರಶ್ನಿಸಿ  ನ್ಯಾಯಾಲಯಕ್ಕೆ ಅರ್ಜಿ ಹಾಕು­ವು­ದಿಲ್ಲ’ ಎಂದರು.

ಘಟನೆ ಕುರಿತಂತೆ ಸುದ್ದಿಗಾರ­ರೊಂದಿಗೆ ಮಾತನಾಡಿದ ಪ್ರೊ.ಚಂದ್ರಮಾ, ‘ಹೈಕೋರ್ಟ್‌ ಸರ್ಕಾ­ರದ ಆದೇಶವನ್ನು ಅನೂರ್ಜಿತಗೊಳಿಸಿ­ರು­ವು­ದರಿಂದ ಈ ವಿ.ವಿಗೆ ನಾನೇ ಕುಲ­ಸಚಿವೆ. ಒಬ್ಬ ಕುಲಸಚಿವರನ್ನು ವರ್ಗಾ­ವಣೆ ಮಾಡುವ ಅಧಿಕಾರ ಕೇವಲ ರಾಜ್ಯಪಾಲರಿಗಿದೆ. ಈ ಹಿಂದೆ ನನ್ನನ್ನು ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ  ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆ. ಸದ್ಯ ನನಗೆ ನ್ಯಾಯ ದೊರಕಿದ್ದು, ಕುಲಸಚಿವ ಸ್ಥಾನದ ಅಧಿಕಾರ ಹಸ್ತಾಂತರಿಸ­ಲೇಬೇಕು. ಈಗಿರುವ ಕುಲಸಚಿವರಿಗೆ ನಾನೇನು ಅಧಿಕಾರ ವಹಿಸಿಕೊಟ್ಟಿಲ್ಲ.

ಅವರಾಗಿಯೇ ಅಧಿಕಾರ ವಹಿಸಿ­ಕೊಂಡಿದ್ದಾರೆ.  ಈ ಹಿಂದೆ ಕುಲ­ಸಚಿವೆ­ಯಾಗಿದ್ದಾಗ ಯಾವ ಗೊಂದಲ­ಗಳೂ ಇರಲಿಲ್ಲ. ಸರ್ಕಾರ ಯಾವಾಗ ನನ್ನನ್ನು ಸಂಗೀತ ವಿ.ವಿಗೆ ವರ್ಗಾವಣೆ ಮಾಡಿತೋ ಆಗ ಗೊಂದಲಗಳು ಹುಟ್ಟಿ­ಕೊಂಡವು. ವಾಹನದ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಮೂರನೇ ವ್ಯಕ್ತಿಯಿಂದ ಆರ್‌ಟಿಐ ಅರ್ಜಿ ಹಾಕಿಸಿ ಇಷ್ಟೆಲ್ಲ ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ’ ಎಂದರು.

ಸ್ಪಷ್ಟ ಆದೇಶಕ್ಕೆ ಕಾದರು
ಸ್ಪಷ್ಟ ಆದೇಶಕ್ಕಾಗಿ ಇಬ್ಬರು ಕುಲಸಚಿವರು ಒಂದೇ ಕೊಠಡಿಯಲ್ಲಿ ಕಾದು ಕುಳಿತಿದ್ದರು. ಸರ್ಕಾರದ ಸ್ಪಷ್ಟ ಆದೇಶ ಬರುತ್ತದೆ ಎಂಬ ನಿರೀಕ್ಷೆಯಿಂದ ಪ್ರೊ.ಸಿದ್ದೇಗೌಡ ಎಲ್ಲಾ ಕಡತಗಳನ್ನು ಪ್ರೊ.ಚಂದ್ರಮಾ ಅವರಿದ್ದ ಮೇಜಿನ ಮೇಲೆ ಇರಿಸಿದ್ದರು. ಅದೂ ಅಲ್ಲದೇ ಕುಲಸಚಿವ ಸ್ಥಾನ ತ್ಯಜಿಸಿ ಹೋಗಲು ತಮ್ಮ ಎಲ್ಲಾ ವಸ್ತುಗಳನ್ನು ಅವರು ಸಿದ್ಧಪಡಿಸಿಟ್ಟುಕೊಂಡಿದ್ದರು. ಆದರೆ ನ್ಯಾಯಾಲ­ಯಕ್ಕೆ ರಜೆ ಇದ್ದ ಕಾರಣ ಆದೇಶ ವಿ.ವಿಗೆ ತಲುಪಲಿಲ್ಲ. ಜತೆಗೆ ಅಕ್ಟೋಬರ್‌ 6ರವರೆಗೂ ಹೈಕೋರ್ಟ್‌ಗೆ ರಜೆ ಇರುವುದರಿಂದ ಅಲ್ಲಿಯವರೆಗೂ ಪ್ರೊ. ಸಿದ್ದೇಗೌಡರೇ ಮುಂದುವರಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.