ADVERTISEMENT

ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ: ಮತ್ತೊಬ್ಬ ಆರೋಪಿ ಸಿಐಡಿ ವಶ?

​ಪ್ರಜಾವಾಣಿ ವಾರ್ತೆ
Published 24 ಜುಲೈ 2016, 13:57 IST
Last Updated 24 ಜುಲೈ 2016, 13:57 IST
ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ:  ಮತ್ತೊಬ್ಬ ಆರೋಪಿ ಸಿಐಡಿ ವಶ?
ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ: ಮತ್ತೊಬ್ಬ ಆರೋಪಿ ಸಿಐಡಿ ವಶ?   

ಚಿಕ್ಕಮಗಳೂರು: ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ ಮತ್ತು ತೇಜಸ್‌ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಯನ್ನು ಸಿಐಡಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಈವರೆಗೆ ಸೆರೆ ಸಿಕ್ಕಿದವರ ಸಂಖ್ಯೆ ನಾಲ್ಕಕ್ಕೇರಿದಂತಾಗಿದೆ.

‘ತುಮಕೂರು ಮೂಲದ ಜಾಯ್‌ (22) ಎಂಬ ಯುವಕನನ್ನು ಸಿಐಡಿ ತಂಡ ವಶಕ್ಕೆ ತೆಗೆದುಕೊಂಡಿದೆ. ತೇಜಸ್‌ ಅಪಹರಿಸಿದ್ದ 7 ಮಂದಿ ಅಪಹರಣಕಾರರಲ್ಲಿ ಈತನೂ ಇದ್ದ ಎನ್ನುವುದು ವಿಚಾರಣೆಯಲ್ಲಿ ದೃಢಪಟ್ಟಿದೆ’ ಎಂದು ತನಿಖಾ ತಂಡದ ಮೂಲಗಳು ಭಾನುವಾರ ‘ಪ್ರಜಾವಾಣಿ’ಗೆ ತಿಳಿಸಿವೆ.

‘ಸಿಐಡಿ ವಶದಲ್ಲಿರುವ ಆರೋಪಿ ಅಭಿರಾಮ ನೀಡಿದ ಸುಳಿವು ಆಧರಿಸಿ ಜಾಯ್‌ನನ್ನು ಬೆಂಗಳೂರಿನಲ್ಲಿ ಸಿಐಡಿ ತಂಡ ಸೆರೆ ಹಿಡಿದಿದೆ. ಈತ ಕೂಡ ಅಭಿರಾಮನ ಸಹಚರ. ನವೀನ್‌ ಶೆಟ್ಟಿ ಎಂಬಾತ ತೇಜಸ್‌ ಅಪಹರಿಸಿ ತಂದರೆ ತಲಾ ₹40 ಸಾವಿರ ಕೊಡುವುದಾಗಿ 7 ಮಂದಿಗೆ ಆಮಿಷ ತೋರಿಸಿದ್ದ. ಆದರೆ, ಪೂರ್ತಿ ಹಣ ಸಂದಾಯ ಮಾಡಲಿಲ್ಲ. ಎಲ್ಲರಿಂದ ಕೇವಲ ₹50 ಸಾವಿರ ನೀಡಿದ್ದ ಎನ್ನುವ ಸಂಗತಿಯನ್ನು ಆರೋಪಿ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾನೆ. ಅಭಿರಾಮ ಮತ್ತು ಜಾಯ್‌ ಇಬ್ಬರನ್ನೂ ತನಿಖಾ ತಂಡಗಳು ತೀವ್ರ ವಿಚಾರಣೆಗೆ ಒಳಪಡಿಸಿವೆ’ ಎಂದು ಮೂಲಗಳು ತಿಳಿಸಿವೆ.

‘ತೇಜಸ್‌ ಅಪಹರಿಸಲು ಖಾಂಡ್ಯ ಪ್ರವೀಣ್‌ಗೆ ಸುಪಾರಿ ನೀಡಿದ್ದ ಕಲ್ಮನೆ ಚಿಟ್‌ಫಂಡ್ ಸಂಸ್ಥೆ ಮುಖ್ಯಸ್ಥ ನಟರಾಜನ ಸಹೋದರನೊಬ್ಬನಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ಆತ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಪ್ರಕರಣದ ಪ್ರಮುಖ ಸೂತ್ರಧಾರ, ತಲೆಮರೆಸಿಕೊಂಡಿರುವ ಆರೋಪಿ ವಿಶ್ವ ಹಿಂದೂ ಪರಿಷತ್‌ ಶಿವಮೊಗ್ಗ ವಿಭಾಗೀಯ ಕಾರ್ಯದರ್ಶಿ ಖಾಂಡ್ಯ ಪ್ರವೀಣ್‌, ನವೀನ್‌ ಶೆಟ್ಟಿ ಹಾಗೂ ಆತನನ ಸಹಚರರಿಗೆ ಸಿಐಡಿ ತಂಡಗಳು ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ತೀವ್ರ ಶೋಧ ನಡೆಸುತ್ತಿವೆ. ಪ್ರಕರಣದಲ್ಲಿ ಖಾಂಡ್ಯ ಪ್ರವೀಣ್‌ಗೆ ಸಹಕರಿಸಿರುವ ಶಂಕೆ ಮೇರೆಗೆ, ಆತನ ಆಪ್ತರಾದ ಕೆಲವು ಬಜರಂಗದಳದ ಮಾಜಿ ಸದಸ್ಯರಿಗಾಗಿ ನಗರದಲ್ಲಿ ಸಿಐಡಿ ತಂಡ ಹುಡುಕಾಟ ನಡೆಸುತ್ತಿದೆ. ಶಂಕಿತರು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ನಗರ ತೊರೆದಿದ್ದಾರೆ’ ಎನ್ನುತ್ತವೆ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT