ADVERTISEMENT

ಕವಿಮನೆ ಕಳವು: ಆರೋಪಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 16:18 IST
Last Updated 26 ನವೆಂಬರ್ 2015, 16:18 IST

ಶಿವಮೊಗ್ಗ: ಕುಪ್ಪಳಿ ಕವಿಮನೆಯ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ತಾಲ್ಲೂಕು ತುರ್ಚಘಟ್ಟದ ರೇವಣಸಿದ್ದಪ್ಪ ಅಲಿಯಾಸ್‌ ಕಾಯಕದ ರೇವಣ್ಣ (45) ಎಂಬ ಆರೋಪಿಯನ್ನು ಗುರುವಾರ ರಾತ್ರಿ ದಾವಣಗೆರೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈತ ಹಿಂದೆಯೂ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮುಖ್ಯವಾಗಿ ದೇವಸ್ಥಾನಗಳಲ್ಲಿ ಹುಂಡಿ ಹಣ ಕದಿಯುವುದು. ಆಭರಣ ದೋಚುವುದು ಮಾಡುತ್ತಿದ್ದ. ಈತನ ವಿರುದ್ಧ ಹದಡಿ ಠಾಣೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ಒಂದೆರಡು ಬಾರಿ ಕಾರಾಗೃಹಕ್ಕೂ ಹೋಗಿ ಬಂದಿದ್ದ. ವರ್ಷದ ಹಿಂದೆ ಜಾಮೀನಿನ ಮೇಲೆ ಹೊರ ಬಂದ ನಂತರ ತಲೆಮರೆಸಿಕೊಂಡಿದ್ದ.

ಹಲವು ದಿನಗಳ ಹಿಂದೆಯೇ ತೀರ್ಥಹಳ್ಳಿ ತಾಲ್ಲೂಕಿಗೆ ಬಂದು, ಕಳವು ಮಾಡಲು ಹೊಂಚು ಹಾಕಿದ್ದ. ಕವಿಮನೆ ಹಾಗೂ ಕವಿಶೈಲಕ್ಕೆ ಪ್ರವಾಸಿಗರ ಸೋಗಿನಲ್ಲಿ ಬಂದು ಅಲ್ಲಿನ ಎಲ್ಲ ಮಾಹಿತಿ ಸಂಗ್ರಹಿಸಿದ್ದ. ದೇವಾಲಯಗಳಂತೆ ಅಲ್ಲಿ ಭಾರಿ ಹಣ ಇರಬಹುದು ಎಂದು ಲೆಕ್ಕಚಾರ ಹಾಕಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನ. 23ರ ರಾತ್ರಿ ಕವಿಮನೆಯ ಆವರಣ ಪ್ರವೇಶಿಸಿದ ಆರೋಪಿ, ಪದ್ಮವಿಭೂಷಣ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಕಳವು ಮಾಡಿದ್ದಲ್ಲದೇ, ಪೀಠೋಪಕರಣ, ಮತ್ತಿತರ ಸಾಮಗ್ರಿ ಧ್ವಂಸ ಮಾಡಿದ್ದ. ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಈ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಆರೋಪಿ ಸುಳಿವು ನೀಡಿದವರಿಗೆ ₹ 10 ಸಾವಿರ ಬಹುಮಾನ ಘೋಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT