ತರೀಕೆರೆ: ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕುಡಿಯಲು ನೀರು ಸಿಗದೆ ಜನ, ಜಾನುವಾರು ಪರದಾಡುವಂತಾಗಿದೆ. ಬೇಸಿಗೆಯ ಆರಂಭದಲ್ಲಿಯೇ ಹನಿ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.
ಹಾಳೂರು ಗ್ರಾಮದಲ್ಲಿ ಜಾನುವಾರು ತೊಟ್ಟಿಯಲ್ಲಿ ಸಿಗುವ ಕೊಳವೆ ಬಾವಿಯ ಅಶುದ್ಧ ನೀರಿಗೆ ಮಹಿಳೆಯರು ಸಾಲುಗಟ್ಟಿ ನಿಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಮಲ್ಲೇನಹಳ್ಳಿಯಿಂದ ಅನತಿ ದೂರದಲ್ಲಿರುವ ಈ ಗ್ರಾಮದಲ್ಲಿ ರಸ್ತೆ ಹಾಗೂ ಯಾವುದೇ ಮೂಲ ಸೌಕರ್ಯಗಳು ಇಲ್ಲ. 125ಕ್ಕೂ ಹೆಚ್ಚು ಕುಂಟುಂಬಗಳು ಇಲ್ಲಿದ್ದು, ಯಾವುದೇ ಸೌಲಭ್ಯ ಬೇಕೆಂದರೂ ಲಿಂಗದಹಳ್ಳಿಗೆ ಅಥವಾ 10 ಕಿಮೀ ದೂರದ ತರೀಕೆರೆ ಪಟ್ಟಣಕ್ಕೆ ಬರಬೇಕು.
ಗ್ರಾಮ ಪಂಚಾಯಿತಿ ಈ ಹಿಂದೆ ಕೊಳವೆ ಬಾವಿಯಿಂದ ನೀರನ್ನು ಪೂರೈಸುತ್ತಿತ್ತು. ಆದರೆ ಆ ಕೊಳವೆ ಬಾವಿ ಈಗ ಬತ್ತಿ ಹೋಗಿದೆ. ಇರುವ ಒಂದೆರಡು ಕೊಳವೆ ಬಾವಿಗಳಿಂದ ‘ಒಂದು ದಿನಕ್ಕೆ ಒಂದು ಕೊಡ ನೀರು’ ಪಡೆಯುವ ಸ್ಥಿತಿ ಇದೆ.
ಈಗಲೇ ಇಲ್ಲಿ ಬರಗಾಲ ಸ್ಥಿತಿ ಎದುರಾಗಿದೆ. ಹಾಳೂರು ಗ್ರಾಮದಲ್ಲಿ ನೀರು ನೀಡುವ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಒಂದು ಕೊಳವೆ ಬಾವಿಯಲ್ಲಿ ಅರ್ಧ ಇಂಚು ನೀರು ಮಾತ್ರ ಸಿಗುತ್ತಿದೆ. ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಕೂಡಾ ಕಾಡುತ್ತಿರುವುದರಿಂದ ಸಿಕ್ಕಷ್ಟು ನೀರನ್ನು ಜನರು ತೀರ್ಥದಂತೆ ಹಿಡಿದುಕೊಂಡು ಹೋಗುತ್ತಿದ್ದಾರೆ.
‘ಲಿಂಗದಹಳ್ಳಿ ಹೋಬಳಿಗೆ ಈವರೆಗೂ ನೀರಾವರಿ ಯೋಜನೆಯನ್ನು ಜಾರಿ ಮಾಡಿಲ್ಲ. ಮತ ಕೇಳಲು ಮಾತ್ರ ಎಲ್ಲರೂ ಬರುತ್ತಾರೆ. ಕಲ್ಲತ್ತಗಿರಿ ಪೈಪ್ಲೈನ್ ಕೆಲಸ ಶೀಘ್ರ ಮುಗಿದರೆ ಸ್ಪಲ್ಪವಾದರೂ ನೀರು ಸಿಗಬಹುದು, ತಕ್ಷಣ ಕಾಮಗಾರಿ ಮುಗಿಸಲಿ’ ಎಂಬುದು ಗ್ರಾಮದ ಕವಿತಾ ಅವರ ಒತ್ತಾಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.