ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ, ಕೈದಿಯೊಬ್ಬ ಸಹ ಕೈದಿಗಳೊಂದಿಗೆ ಸೇರಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ ಎನ್ನಲಾದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಚಿತ್ರದಲ್ಲಿರುವ ಬಹುತೇಕರು ಬಣ್ಣದ ಬಟ್ಟೆ ಧರಿಸಿದ್ದಾರೆ. ಬ್ಯಾರಕ್ನಲ್ಲಿಯೇ ಕೇಕ್ ಕತ್ತರಿಸುತ್ತಿರುವಂತೆ, ಸಹ ಕೈದಿಗಳಿಗೆ ತಿನ್ನಿಸುತ್ತಿರುವಂತೆ ಕಾಣುವ ದೃಶ್ಯಗಳು ಅದರಲ್ಲಿವೆ. ಕೆಲವರು ಮೊಬೈಲ್ನಲ್ಲಿ ಫೋಟೊ ಕ್ಲಿಕ್ಕಿಸುತ್ತಿರುವುದು ಕೂಡ ಕಾಣಿಸುತ್ತಿದೆ. ಆದರೆ, ಚಿತ್ರದಲ್ಲಿರುವವರ ಮಾಹಿತಿ ಲಭ್ಯವಾಗಿಲ್ಲ.
ಇದನ್ನು ನಿರಾಕರಿಸಿರುವ ಕಾರಾಗೃಹ ಅಧೀಕ್ಷಕ ಟಿ.ಪಿ. ಶೇಷ, ‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರಗಳಿಗೂ ನಮ್ಮ ಕಾರಾಗೃಹಕ್ಕೂ ಯಾವುದೇ ಸಂಬಂಧವಿಲ್ಲ. ಇಲ್ಲಿ ಯಾರೂ ಜನ್ಮದಿನ ಆಚರಿಸಿಕೊಳ್ಳುವುದಕ್ಕೆ ಅವಕಾಶ ಕೊಟ್ಟಿಲ್ಲ. ಇದರಿಂದಾಗಿ ತನಿಖೆ ನಡೆಸುವ ಅಗತ್ಯವೂ ಕಾಣುತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಕೈದಿ ಮರ್ಮಾಂಗಕ್ಕೆ ಗಾಯ?: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿನ ಅಕ್ರಮಗಳ ಕುರಿತು ಕಾರಾಗೃಹ ಇಲಾಖೆಯ ಡಿಐಜಿಯಾಗಿದ್ದ ಡಿ. ರೂಪಾ ಅವರಿಗೆ ಮಾಹಿತಿ ನೀಡಿದವರಲ್ಲಿ ಒಬ್ಬ ಎನ್ನಲಾದ ಕೈದಿ ಅನಂತಮೂರ್ತಿ ಎನ್ನುವವರ ಮರ್ಮಾಂಗಕ್ಕೆ ಗಾಯವಾಗಿದ್ದು, ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ರಾತ್ರೋರಾತ್ರಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.
ಪರಪ್ಪನ ಅಗ್ರಹಾರದಲ್ಲಿದ್ದ ಮೂವರು ಕೈದಿಗಳನ್ನು ಇಲ್ಲಿನ ಹಿಂಡಲಗಾದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಇದೇ 16ರಂದು ಸ್ಥಳಾಂತರಿಸಲಾಗಿತ್ತು. ಜೈಲಿನಲ್ಲಿನ ಅಕ್ರಮಗಳ ಮಾಹಿತಿ ಕೊಟ್ಟಿದ್ದರಿಂದ ಸಿಟ್ಟಿಗೆದ್ದಿರುವ ಅಲ್ಲಿನ ಹಿರಿಯ ಅಧಿಕಾರಿಯೊಬ್ಬರು ತೀವ್ರವಾಗಿ ಥಳಿಸಿ, ನಂತರ ಬೆಳಗಾವಿಗೆ ಕಳುಹಿಸಿಕೊಟ್ಟಿದ್ದರು ಎಂದು ಆರೋಪಿಸಲಾಗುತ್ತಿದೆ. ಆರೋಪ ತಳ್ಳಿಹಾಕಿರುವ ಶೇಷ ಅವರು, ‘ಬೆಂಗಳೂರಿನಿಂದ ಬಂದಿರುವ ಕೈದಿಗಳೆಲ್ಲರೂ ಆರೋಗ್ಯವಾಗಿದ್ದಾರೆ. ಹೀಗಾಗಿ, ಅವರಿಗೆ ಚಿಕಿತ್ಸೆ ಕೊಡಿಸುವ ಪ್ರಮೇಯವೇ ಬರುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.