ADVERTISEMENT

ಟ್ರ್ಯಾಕ್‌ಮನ್‌ ಸಮಯಪ್ರಜ್ಞೆ ತಪ್ಪಿದ ಭಾರಿ ಅನಾಹುತ

ಗುಡ್ಡ ಕುಸಿತ: ಎರಡು ತಾಸು ರೈಲು ಸಂಚಾರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ಟ್ರ್ಯಾಕ್‌ಮನ್‌ ಸಮಯಪ್ರಜ್ಞೆ ತಪ್ಪಿದ ಭಾರಿ ಅನಾಹುತ
ಟ್ರ್ಯಾಕ್‌ಮನ್‌ ಸಮಯಪ್ರಜ್ಞೆ ತಪ್ಪಿದ ಭಾರಿ ಅನಾಹುತ   

ಆಲಮಟ್ಟಿ (ವಿಜಯಪುರ): ಗುಡ್ಡ ಕುಸಿತದಿಂದಾಗಿ ಭಾನುವಾರ ಮಧ್ಯಾಹ್ನ ಇಲ್ಲಿ ಸಂಭವಿಸಬಹುದಾಗಿದ್ದ ರೈಲು ಅವಘಡವೊಂದು ಟ್ರ್ಯಾಕ್‌ಮನ್‌ ಸಮಯಪ್ರಜ್ಞೆಯಿಂದ ತಪ್ಪಿದೆ.

ಇಲ್ಲಿನ ಜವಾಹರ ನವೋದಯ ಶಾಲೆಯ ಹಿಂಭಾಗದ ಗುಡ್ಡದ ಬಳಿ ಗದಗ–ಹುಟಗಿ ದ್ವಿಪಥ ಹಳಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ಗುಡ್ಡವನ್ನು ಅಗೆಯಲಾಗುತ್ತಿದ್ದು ಈ ವೇಳೆ ಗುಡ್ಡ ಏಕಾಏಕಿ ಕುಸಿದಿದೆ.

ಇದೇ ಸಮಯಕ್ಕೆ, ತುಸು ದೂರದಲ್ಲಿಯೇ ವಿಜಯಪುರ–ಹುಬ್ಬಳ್ಳಿ (06920) ರೈಲು ಬರುತ್ತಿತ್ತು. ಇದನ್ನು ಗಮನಿಸಿದ ಟ್ರ್ಯಾಕ್‌ಮನ್‌ ಮಂಜುನಾಥ ಗುಣ್ಣನವರ ತಕ್ಷಣವೇ ಕೆಂಪು ಬಾವುಟ ಹಿಡಿದು ರೈಲಿನತ್ತ ಓಡಿದ್ದಾರೆ. ತಿರುವಿನಲ್ಲಿ ಬರುತ್ತಿದ್ದ ರೈಲಿನ ಚಾಲಕ ಬಾವುಟವನ್ನು ಗಮನಿಸಿ ರೈಲನ್ನು ನಿಲ್ಲಿಸಿದ್ದಾರೆ.

ADVERTISEMENT

ನಂತರ ಹಳಿಯ ಮೇಲೆ ಬಿದ್ದಿದ್ದ ಮಣ್ಣನ್ನು ದ್ವಿಪಥ ಹಳಿ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರಿಂದ ತೆರವುಗೊಳಿಸಲಾಯಿತು. ಸಂಜೆ 5ರಿಂದ ರೈಲು ಸಂಚಾರ ಪುನರಾರಂಭಗೊಂಡಿತು ಎಂದು ಆಲಮಟ್ಟಿ ರೈಲ್ವೆ ನಿಲ್ದಾಣದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.