ಬೆಂಗಳೂರು: ‘ಸಿಐಡಿ ತನಿಖೆ ವಿಳಂಬವಾಗಬಾರದು ಹಾಗೂ ಆದಷ್ಟು ಬೇಗ ಪ್ರಕರಣ ಮುಕ್ತಾಯವಾಗಬೇಕು ಎಂಬ ಏಕೈಕ ಉದ್ದೇಶದಿಂದಲೇ ಸುಪ್ರೀಂ ಕೋರ್ಟ್ನಲ್ಲಿ ದಾಖಲಿಸಿದ್ದ ವಿಶೇಷ ಮೇಲ್ಮನವಿಯನ್ನು ಹಿಂದಕ್ಕೆ ಪಡೆಯಲಾಗಿದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ಪರ ವಕೀಲರು ಸ್ಪಷ್ಟಪಡಿಸಿದ್ದಾರೆ.
ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಹಿಂದಕ್ಕೆ ಪಡೆದಿರುವ ಕುರಿತಂತೆ ಶ್ರೀಗಳ ಪರ ವಕೀಲ ಕೆ.ಗೋವಿಂದರಾಜು ‘ಪ್ರಜಾವಾಣಿ’ಗೆಪ್ರತಿಕ್ರಿಯಿಸಿದರು.
ಭಯ: ಆದರೆ ‘ಮಧ್ಯಂತರ ಜಾಮೀನು ವಜಾಗೊಳ್ಳುವ ಭಯದಿಂದ ಶ್ರೀಗಳು ಅರ್ಜಿ ಹಿಂದಕ್ಕೆ ಪಡೆದಿದ್ದಾರೆ’ ಎಂದು ರಾಮಕಥಾ ಗಾಯಕಿ ಪರ ವಕೀಲರು ಹೇಳಿದ್ದಾರೆ. ‘ಈ ಸಂದರ್ಭದಲ್ಲಿ ಅವರು ಏನಾದರೂ ಕಾರಣ ಹೇಳಲೇ ಬೇಕಿತ್ತಲ್ಲ. ಆದಕ್ಕೇ ಇಂತಹ ಸಬೂಬು ನುಡಿಯುತ್ತಿದ್ದಾರೆ’ ಎಂದು ಅವರು ಕಟಕಿಯಾಡಿದ್ದಾರೆ.
‘ಒಂದು ವೇಳೆ ಸುಪ್ರೀಂ ಕೋರ್ಟ್ನಲ್ಲಿ ಶ್ರೀಗಳ ಅರ್ಜಿ ದಾಖಲಾಗಿದ್ದರೆ ಛೀಮಾರಿ ಹಾಕಿಸಿಕೊಳ್ಳುವ ಭಯವಿತ್ತು. ಆದ್ದರಿಂದ ಅವರು ಹೆದರಿ ಹಿಂದೆ ಸರಿದಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ಮುಂಬೈನಲ್ಲೂ ಮಹಜರ್: ಶ್ರೀಗಳು ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾದ ಸ್ಥಳಗಳ ಮಹಜರು ನಡೆಸಲು ಸಿಐಡಿ ತಂಡ ಸದ್ಯ ಮುಂಬೈನಲ್ಲಿ ಬೀಡು ಬಿಟ್ಟಿದೆ. ತಂಡದಲ್ಲಿ ಸಿಐಡಿ ಎಸ್ಪಿ ಸಿರಿಗೌರಿ, ಡಿವೈಎಸ್ಪಿ ಧರಣೇಶ್, ಇನ್ಸ್ಪೆಕ್ಟರ್ ಗೋವಿಂದರಾಜು ಸೇರಿದಂತೆ ಒಟ್ಟು 7 ಅಧಿಕಾರಿಗಳು ಇದ್ದಾರೆ. ಸಂತ್ರಸ್ತೆ ಕೂಡ ತಂಡದ ಜೊತೆಗಿದ್ದು ಇವರಿಗೆ ಅಂಗರಕ್ಷಕನನ್ನು ಒದಗಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.