ಮುಡಿಪು (ದಕ್ಷಿಣ ಕನ್ನಡ ಜಿಲ್ಲೆ): ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಪ್ರವಾಸಕ್ಕೆ ಹೊರಟಿದ್ದ ತಂಡವನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ಶನಿವಾರ ರಾತ್ರಿ ತಡೆದು ನಿಲ್ಲಿಸಿ ವಿದ್ಯಾರ್ಥಿಗಳನ್ನು ಹಾಗೂ ಸಂಘಟಕರನ್ನು ತರಾಟೆಗೆ ತೆಗೆದುಕೊಂಡು ಪ್ರವಾಸ ರದ್ದಾಗುವಂತೆ ಮಾಡಿದ್ದಾರೆ.
ಬಳಿಕ ತಡರಾತ್ರಿ ಕೆಲವು ದುಷ್ಕರ್ಮಿಗಳು ಅಲ್ಲಿನ ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ತೂರಿದ್ದರು. ಇದರಿಂದ ಪರಿಸರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಭಾನುವಾರ ಮುಡಿಪುವಿನಲ್ಲಿ ಅಂಗಡಿಗಳು ಮುಚ್ಚಿದ್ದವು.
14 ವಿದ್ಯಾರ್ಥಿನಿಯರು ಮತ್ತು 24 ವಿದ್ಯಾರ್ಥಿಗಳು ಬೆಂಗಳೂರು ಮತ್ತು ಮೈಸೂರಿಗೆ ಮೂರು ದಿನಗಳ ಶೈಕ್ಷಣಿಕ ಪ್ರವಾಸಕ್ಕೆಂದು ಹೊರಟಿದ್ದರು. ಇದಕ್ಕೆ ಖಾಸಗಿ ಬಸ್ ನಿಗದಿ ಪಡಿಸಲಾಗಿತ್ತು. ‘ವಿದ್ಯಾರ್ಥಿನಿಯರಲ್ಲಿ ಹೆಚ್ಚಿನವರು ಹಿಂದೂ ಸಮುದಾಯದವರು; ಆದರೆ ಹುಡುಗರಲ್ಲಿ ಅರ್ಧದಷ್ಟು ಮುಸ್ಲಿಂ ಸಮುದಾಯದವರು’ ಎಂಬ ನೆಪದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಮುಡಿಪುವಿನಲ್ಲಿ ಸೇರಿದ್ದರು.
ಕಾಲೇಜ್ ಆವರಣದಿಂದ ಬಸ್ ಹೊರಗೆ ಬರುತ್ತಿದ್ದಾಗ ಅದನ್ನು ತಡೆದು ಮುತ್ತಿಗೆ ಹಾಕಿದರು. ಗಾಜನ್ನು ಪುಡಿ ಮಾಡಿದರು. ವಿದ್ಯಾರ್ಥಿಗಳನ್ನು ಕೆಳಗಿಳಿಸಿದರು ಎನ್ನಲಾಗಿದೆ.
ಮುಖ್ಯಾಂಶಗಳು
* ವಿದ್ಯಾರ್ಥಿಗಳ 3 ದಿನಗಳ ಪ್ರವಾಸ ರದ್ದು
* ಕಲ್ಲೆಸೆತ: ಐದು ಜನರ ಬಂಧನ
* * *
ಬೆಂಗಳೂರಿನಲ್ಲಿ ವಿಧಾನಮಂಡಲ ಅಧಿವೇಶನ ವೀಕ್ಷಿಸುವುದಕ್ಕಾಗಿ ವಿದ್ಯಾರ್ಥಿಗಳಿಗೆ ಪ್ರವಾಸ ಏರ್ಪಡಿಸಲಾಗಿತ್ತು. ಪ್ರವಾಸಕ್ಕೆ ಎಲ್ಲ ವಿದ್ಯಾರ್ಥಿಗಳ ಪೋಷಕರ ಅನುಮತಿ ಪತ್ರವನ್ನೂ ಪಡೆಯಲಾಗಿತ್ತು. ವಿವಾದದ ಬಳಿಕ ಪ್ರವಾಸ ರದ್ದುಗೊಳಿಸಲಾಗಿದೆ.
–ನಂದಕಿಶೋರ್,
ನೋಡಲ್ ಅಧಿಕಾರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.