ಬಳ್ಳಾರಿ: ನಕಲಿ ಬಂಗಾರದ ನಾಣ್ಯಗಳನ್ನು ನೀಡಿ, ಸ್ಥಳೀಯ ವ್ಯಾಪಾರಿಗಳಿಬ್ಬರಿಗೆ ₹18 ಲಕ್ಷ ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಹೊಸಪೇಟೆ ಮೂಲದ ಮಹೇಂದ್ರಕುಮಾರ್ ಮತ್ತು ಕೊಪ್ಪಳದ ರಮೇಶಸಿಂಗ್ ಹಣ ಕಳೆದುಕೊಂಡಿದ್ದು, ಇಲ್ಲಿನ ಗಾಂಧಿನಗರದ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.
ರಾಜಸ್ತಾನ ಮೂಲದ ಕಿಶೋರ್ ಹಾಗೂ ನಗ್ಗಾರಾಮ್ ಎಂಬುವವರು ತಮ್ಮನ್ನು ರೈಲ್ವೆ ಗುತ್ತಿಗೆದಾರರು ಎಂದು ವ್ಯಾಪಾರಸ್ಥರಿಗೆ ಪರಿಚಯಿಸಿಕೊಂಡಿದ್ದಾರೆ. ತಮಗೆ ಅಸಲಿ ಬಂಗಾರದ ನಾಣ್ಯಗಳು ಸಿಕ್ಕಿದ್ದು, ಸಂಶಯವಿದ್ದರೆ ಪರೀಕ್ಷಿಸಿಕೊಳ್ಳಬಹುದೆಂದು ಎರಡು ನಾಣ್ಯಗಳನ್ನು ಅವರಿಗೆ ನೀಡಿದ್ದಾರೆ. ಪರೀಕ್ಷಿಸಿದಾಗ, ನಾಣ್ಯಗಳು ಅಸಲಿಯೆಂದು ಖಾತ್ರಿಯಾಗಿವೆ. ಆನಂತರ ಸ್ಥಳೀಯ ವ್ಯಾಪಾರಸ್ಥರು ಒಂದು ಕೆ.ಜಿಯಷ್ಟು ಬಂಗಾರದ ನಾಣ್ಯಗಳಿಗೆ ಬೇಡಿಕೆ ಇಟ್ಟಿದ್ದಾರೆ.
ನಗರದ ಜೈಲು ರಸ್ತೆಯ ಬಳಿ ಮಾರ್ಚ್ 5ರಂದು ಹಣ ನೀಡಿ, ಅವರಿಂದ ನಾಣ್ಯಗಳನ್ನು ಪಡೆದಿದ್ದಾರೆ. ಆನಂತರ ಅವುಗಳನ್ನು ಬೆಂಗಳೂರಿನ ಚಿನ್ನಾಭರಣ ಅಂಗಡಿಯೊಂದರಲ್ಲಿ ಪರೀಕ್ಷಿಸಲಾಗಿ ಅವು ನಕಲಿ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.