ತೀರ್ಥಹಳ್ಳಿ: ಬೆಂಗಳೂರಿನಲ್ಲಿ ಪಿಯುಸಿ ವಿದ್ಯಾರ್ಥಿನಿ ಗೌತಮಿ ತಲೆಗೆ ಪಿಸ್ತೂಲ್ನಿಂದ ಗುಂಡು ಹಾರಿಸಿ ಆಕೆಯ ಸಾವಿಗೆ ಕಾರಣನಾದ ಮಹೇಶ್ (40) ತೀರ್ಥಹಳ್ಳಿ ತಾಲ್ಲೂಕಿನ ಹೊನ್ನೇತಾಳು ಗ್ರಾಮ ಪಂಚಾಯ್ತಿಯ ಕೆಂದಾಳುಬೈಲಿನವನು ಎಂಬ ವಿಷಯ ಈ ಭಾಗದ ಜನರಲ್ಲಿ ದಿಗಿಲು ಹುಟ್ಟಿಸಿದೆ.
ಉದ್ಯೋಗ ಅರಸಿ ಈ ಭಾಗದ ಅನೇಕರು ಬೆಂಗಳೂರಿಗೆ ತೆರಳಿ ಅಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಅವರಲ್ಲಿ ಹಲವರು ಹಬ್ಬ ಹರಿದಿನಗಳಲ್ಲಿ ಹುಟ್ಟೂರಿಗೆ ಬಂದು ಹೋಗುತ್ತಾರೆ. ಆದರೆ, ಮಹೇಶ್ ಕೆಂದಾಳುಬೈಲಿನ ಸಂಪರ್ಕ ಕಳೆದುಕೊಂಡಿದ್ದಾನೆ.
ಈತನ ತಾಯಿ ಇಂದಿರಾ ಎಂಟು ವರ್ಷದ ಹಿಂದೆಯೇ ಮೃತಪಟ್ಟಿದ್ದಾರೆ. ತಂದೆ ಉಮಾನಾಥ್ ಅಚಾರ್ ಆರು ವರ್ಷ ಹಿಂದೆ ಅಸುನೀಗಿದ್ದರು. ಉಮಾನಾಥ ಅವರ ನಾಲ್ಕು ಮಕ್ಕಳಲ್ಲಿ ಮಹೇಶ್ ಎರಡನೆಯವನಾಗಿದ್ದು, ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾನೆ.
ಮುಖ್ಯಾಂಶಗಳು |
---|
* ಊರಿನ ಜೊತೆಗೆ ಸಂಪರ್ಕ ಇರಲಿಲ್ಲ *ಮಹೇಶ್ಗೆ ತಂದೆ–ತಾಯಿಯೂ ಇಲ್ಲ * ಮೇಗರವಳ್ಳಿಯಲ್ಲಿ ಪಿಯು ಶಿಕ್ಷಣ ಪಡೆದಿದ್ದ |
ಉಮಾನಾಥ್ ಆಚಾರ್ ಅವರ ಪ್ರಥಮ ಪುತ್ರ ರವೀಶ್ ವಿವಾಹವಾಗಿದ್ದು, ಕುಂದಾಪುರದ ಪತ್ನಿ ಮನೆಯಲ್ಲಿಯೇ ನೆಲೆಸಿದ್ದಾರೆ. ಪುತ್ರಿ ಶೈಲಜಾ ಅವರು ತಾಲ್ಲೂಕಿನ ಹೊದಲದವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇನ್ನೊಬ್ಬ ಪುತ್ರಿ ಭಾರತಿ ಅವರು ಹೊಸನಗರ ತಾಲ್ಲೂಕಿನಲ್ಲಿ ನೆಲೆಸಿದ್ದಾರೆ.
ಮಹೇಶ್ ಮೇಗರವಳ್ಳಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದಾನೆ. ಆಗುಂಬೆಯಲ್ಲಿ ಈ ಹಿಂದೆ ವಾಸವಾಗಿದ್ದ ಆತ ಈಗ ಅಲ್ಲಿನ ನಂಟು ಕಳೆದುಕೊಂಡಿದ್ದಾನೆ. ಈ ಭಾಗದ ಜನ, ಮಹೇಶ್ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದಾನೆ ಎಂದು ತಿಳಿದಿದ್ದಾರೆ.
ಕೆಂದಾಳುಬೈಲಿನ ಮಹೇಶ್ ಅವರ ವಾಸದ ಮನೆ ಬಿದ್ದು ಹೋಗುವ ಸ್ಥಿತಿಯಲ್ಲಿದ್ದು, ಈ ಮನೆಗೆ ಯಾರೂ ಬಂದುಹೋಗುತ್ತಿಲ್ಲ ಎಂದು ಆಗುಂಬೆ ಪಿಎಸ್ಐ ನಂಜಪ್ಪ ‘ಪ್ರಜಾವಾಣಿಗೆ’ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.