ಕೆ.ಆರ್.ಪೇಟೆ: ಕ್ರಿಕೆಟ್ ಬೆಟ್ಟಿಂಗ್ಗೆ ಹಣ ಹೊಂದಿಸಲು ಶಶಾಂಕ್ (15) ಎಂಬ ಬಾಲಕನನ್ನು ಕೊಲೆ ಮಾಡಿ, ಮನೆಗೆ ನುಗ್ಗಿ ಕಳವು ಮಾಡಿದ್ದ ಡಿಪ್ಲೊಮಾ ವಿದ್ಯಾರ್ಥಿ ದೀಕ್ಷಿತ್ (19) ಗ್ರಾಮಾಂತರ ಠಾಣೆಯ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ತೇಗನಹಳ್ಳಿ ಗೇಟ್ನ ಆಶೀರ್ವಾದ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಶಶಾಂಕ್ ಮೇ 16ರಂದು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು.
‘ಮೈಸೂರಿನಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ದೀಕ್ಷಿತ್ಗೆ ಹಣದ ಅಗತ್ಯವಿತ್ತು.
ಹೀಗಾಗಿ, ಕಳವು ಕೃತ್ಯಕ್ಕೆ ಮುಂದಾಗಿದ್ದ. ಮೇ 15ರಂದು ರಾತ್ರಿ ಸರ್ಕಾರಿ ನೌಕರರ ವಸತಿ ಗೃಹದ ಮನೆಯೊಂದಕ್ಕೆ ನುಗ್ಗಲು ಹೊಂಚು ಹಾಕಿದ್ದ. ಆದರೆ, ಇಲ್ಲಿ ಜನರಿದ್ದರಿಂದ ಶಶಾಂಕ್ ಬಳಿಗೆ ಬಂದಿದ್ದ’ ಎಂದು ಜಿಲ್ಲಾ ವರಿಷ್ಠಾಧಿಕಾರಿ ಸುಧೀರ್ಕುಮಾರ್ ರೆಡ್ಡಿ ತಿಳಿಸಿದ್ದಾರೆ.
‘ಪರಿಚಯಸ್ಥನಂತೆ ಮಾತನಾಡಿದ ಆರೋಪಿ, ಶಶಾಂಕ್ ಸ್ನೇಹ ಸಂಪಾದಿಸಿ ಮನೆಯಿಂದ ಹೊರಗೆ ಕರೆದೊಯ್ದಿದ್ದ. ನಿರ್ಜನ ಪ್ರದೇಶದಲ್ಲಿ ಕತ್ತು ಹಿಸುಕಿ
ಪ್ರಜ್ಞೆ ತಪ್ಪಿಸಿ, ಕೀಲಿಕೈ ಕಿತ್ತುಕೊಂಡು ಮನೆಗೆ ಬಂದಿದ್ದ. ಎರಡು ಬಳೆ ಹಾಗೂ ಬೆಳ್ಳಿಯ ವಿಗ್ರಹ ಕಳವು ಮಾಡಿ, ಶಶಾಂಕ್ ಬಳಿಗೆ ಮರಳಿದ್ದ. ಉಸಿರಾಡುತ್ತಿದ್ದ ಬಾಲಕನನ್ನು ಕೊಲೆ ಮಾಡಿ ಮೊಬೈಲ್ ಕಿತ್ತು ಪರಾರಿಯಾಗಿದ್ದನು’ ಎಂದು ವಿವರಿಸಿದರು.
ಕದ್ದ ಬಳೆ ಹಿತ್ತಾಳೆಯದಾಗಿದ್ದರಿಂದ ಮನೆಯವರ ಗಮನಕ್ಕೆ ಬಂದಿರಲಿಲ್ಲ. ಬೆಳ್ಳಿಯ ವಿಗ್ರಹವನ್ನು ಗಮನಿಸಿರಲಿಲ್ಲ. ಮಾರಾಟವಾಗಿದ್ದ ಮೊಬೈಲ್್ ಫೋನ್ ನೀಡಿದ ಸುಳಿವಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.