ADVERTISEMENT

ಭಸ್ಮದಲ್ಲಿ ಲೀನರಾದ ಮಹಾಂತ ಶ್ರೀ

ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 21 ಮೇ 2018, 19:30 IST
Last Updated 21 ಮೇ 2018, 19:30 IST
ಇಳಕಲ್‌ನಲ್ಲಿ ಲಿಂಗೈಕ್ಯ ಮಹಾಂತ ಶ್ರೀಗಳ ಪಾರ್ಥಿವ ಶರೀರಕ್ಕೆ ಹಂಗಾಮಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪುಷ್ಪಗುಚ್ಛ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು
ಇಳಕಲ್‌ನಲ್ಲಿ ಲಿಂಗೈಕ್ಯ ಮಹಾಂತ ಶ್ರೀಗಳ ಪಾರ್ಥಿವ ಶರೀರಕ್ಕೆ ಹಂಗಾಮಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪುಷ್ಪಗುಚ್ಛ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು   

ಇಳಕಲ್‌: ಇಳಕಲ್ ವಿಜಯಮಹಾಂತೇಶ ಸಂಸ್ಥಾನ ಮಠದ ಡಾ.ಮಹಾಂತ ಶ್ರೀಗಳ ಅಂತ್ಯಸಂಸ್ಕಾರ, ಸೋಮವಾರ ಮಧ್ಯಾಹ್ನ ಮಠದ ಕರ್ತೃ ಗದ್ದುಗೆಯ ಆವರಣದಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ಸಾರ್ವಜನಿಕರ ಅಂತಿಮ ದರ್ಶನದ ನಂತರ, ನಗರದ ಆರ್. ವೀರಮಣಿ ಕ್ರೀಡಾಂಗಣದಿಂದ ಬೆಳಿಗ್ಗೆ 8 ಗಂಟೆಗೆ ಡಾ. ಮಹಾಂತಶ್ರೀಗಳ ಪಾರ್ಥಿವ ಶರೀರ
ವನ್ನು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ವಿಜಯ ಮಹಾಂತೇಶ್ವರ ಕರ್ತೃ ಗದ್ದುಗೆಗೆ ತರಲಾಯಿತು.

ಮೆರವಣಿಗೆ ಇಕ್ಕೆಲದಲ್ಲಿ ನಿಂತಿದ್ದ ಸಾವಿರಾರು ಜನರು ಪೂಜ್ಯರ ಅಂತಿಮ ದರ್ಶನ ಪಡೆದರು.

ADVERTISEMENT

ಪೊಲೀಸರು 3 ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಹಂಗಾಮಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಜಿಲ್ಲಾಧಿಕಾರಿ ಕೆ.ಜಿ. ಶಾಂತಾರಾಮ್‌ ಪೂಜ್ಯರಿಗೆ ಅಂತಿಮ ನಮನ ಸಲ್ಲಿಸಿದರು.

35 ವರ್ಷಗಳ ಹಿಂದೆ, ಶ್ರೀಗಳು ಮೌನಾನುಷ್ಠಾನ ಮಾಡಿದ ಸ್ಥಳದಲ್ಲಿಯೇ ಸಿದ್ಧಗೊಳಿಸಿದ್ದ ಸಮಾಧಿಯಲ್ಲಿ ಬಸವತತ್ವದಂತೆ ಇಷ್ಟಲಿಂಗ, ರುದ್ರಾಕ್ಷಿ, ವಿಭೂತಿ
ಗಳನ್ನು ಬಳಸಿ, ವಚನ ಪಠಣ, ಅಭಿಷೇಕ ಮಾಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಗದುಗಿನ ತೋಂಟದಾರ್ಯ ಶ್ರೀಗಳು ಹಾಗೂ ಚಿತ್ರದುರ್ಗದ ಮುರುಘಾಶರಣರ ನೇತೃತ್ವದಲ್ಲಿ ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ, ಮುದಗಲ್‌ ಮಹಾಂತ ಸ್ವಾಮೀಜಿ ಅಂತಿಮ ಸಂಸ್ಕಾರದ ವಿಧಿವಿಧಾನ ನೆರವೇರಿಸಿದರು. ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.