ADVERTISEMENT

ಮುಖ್ಯಮಂತ್ರಿಗೆ ‘ಚಿನ್ನದ ಕಿರೀಟ’ ಉಡುಗೊರೆ!

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 20:05 IST
Last Updated 16 ಡಿಸೆಂಬರ್ 2017, 20:05 IST
ಕಲಬುರ್ಗಿ ಜಿಲ್ಲೆಯ ಅಫಜಲಪುರದಲ್ಲಿ ಶನಿವಾರ ನಡೆದ ‘ಸಾಧನಾ ಸಂಭ್ರಮ’ ಕಾರ್ಯಕ್ರಮದಲ್ಲಿ ಚಿನ್ನದ ಕಿರೀಟ ಧರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕಲಬುರ್ಗಿ ಜಿಲ್ಲೆಯ ಅಫಜಲಪುರದಲ್ಲಿ ಶನಿವಾರ ನಡೆದ ‘ಸಾಧನಾ ಸಂಭ್ರಮ’ ಕಾರ್ಯಕ್ರಮದಲ್ಲಿ ಚಿನ್ನದ ಕಿರೀಟ ಧರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ   

ಅಫಜಲಪುರ (ಕಲಬುರ್ಗಿ ಜಿಲ್ಲೆ): ಇಲ್ಲಿನ ನ್ಯಾಷನಲ್ ಫಂಕ್ಷನ್ ಹಾಲ್‌ ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ‘ಸಾಧನಾ ಸಂಭ್ರಮ’ ಸಮಾವೇಶದಲ್ಲಿ ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದರು.

ಮುಖ್ಯಮಂತ್ರಿ ಭಾಷಣಕ್ಕೂ ಮುನ್ನ ನಿರೂಪಕರು ‘ಶಾಸಕರು ಚಿನ್ನದ ಕಿರೀಟ, ಬೆಳ್ಳಿ ಖಡ್ಗ ಮತ್ತು ಬೆಳ್ಳಿಯ ಹಾರವನ್ನು ಮುಖ್ಯಮಂತ್ರಿಗೆ ಸಮರ್ಪಿಸಲಿದ್ದಾರೆ’ ಎಂದು ತಿಳಿಸಿದರು. ಬಳಿಕ ಮಾಲೀಕಯ್ಯ ಅವರು ಮುಖ್ಯಮಂತ್ರಿಗೆ ಕಿರೀಟ, ಖಡ್ಗ ಹಾಗೂ ಹಾರವನ್ನು ಅರ್ಪಿಸಿದರು.

ಚಿನ್ನದ ಕಿರೀಟದ ತೂಕ 500 ಗ್ರಾಂ ಎಂದು ಕೆಲವರು, 250 ಗ್ರಾಂ ಎಂದೂ ಇನ್ನು ಕೆಲವರು ತಿಳಿಸಿದರು. ‘ಕಿರೀಟದ ಅಂದಾಜು ಮೌಲ್ಯ ₹5 ಲಕ್ಷ. ಖಡ್ಗದ ಮೌಲ್ಯ ₹30 ಸಾವಿರ ಹಾಗೂ ಹಾರದ ಮೌಲ್ಯ ₹25 ಸಾವಿರ ಇರಬಹುದು’ ಎಂದು ಶಾಸಕರ ಆಪ್ತ ಮೂಲಗಳು ಹೇಳುತ್ತವೆ.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಾಲೀಕಯ್ಯ ಗುತ್ತೇದಾರ, ‘ಕಿರೀಟ, ಖಡ್ಗ ಮತ್ತು ಹಾರ ಕ್ಷೇತ್ರದ ಕಾರ್ಯಕರ್ತರು ಕೊಟ್ಟ ಉಡುಗೊರೆ. ಅವರ ಪರವಾಗಿ ಮುಖ್ಯಮಂತ್ರಿಗೆ ನೀಡಿದ್ದೇನೆ. ಅದು ಚಿನ್ನದ ಕಿರೀಟ ಅಲ್ಲ, ಚಿನ್ನ ಲೇಪಿತ ಕಿರೀಟವಾಗಿದ್ದು, ಮೌಲ್ಯ ಗೊತ್ತಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.