ಹುಬ್ಬಳ್ಳಿ: ‘ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗೆ ರಾಜ್ಯವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದರೆ ಧರ್ಮಯುದ್ಧ ಆರಂಭಿಸಬೇಕಾಗುತ್ತದೆ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಇಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಎಚ್ಚರಿಕೆಯಿಂದ ವೀರಶೈವ ಲಿಂಗಾಯತ ಧರ್ಮದ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಧರ್ಮರಚನೆಯ ಕುರಿತು ನಾಗಮೋಹನದಾಸ್ ಸಮಿತಿ ನೀಡಿರುವ ವರದಿ ಏಕಪಕ್ಷೀಯವಾಗಿದೆ’ ಎಂದರು.
‘ಲಿಂಗಾಯತಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಕೊಡುವುದಾದರೆ, ‘ವೀರಶೈವ–ಲಿಂಗಾಯತ’ಕ್ಕೂ ಆ ಸ್ಥಾನಮಾನ ಕೊಡಲಿ’ ಎಂದರು.
‘ಸಮುದಾಯದ ಶೇ 95ರಷ್ಟು ಜನ ಪ್ರತ್ಯೇಕ ಧರ್ಮ ವಿಚಾರವನ್ನು ತಿರಸ್ಕರಿಸಿದ್ದಾರೆ. ತಜ್ಞರ ಸಮಿತಿಯಲ್ಲಿರುವವರು ಲಿಂಗಾಯತ ಸಮುದಾಯದಲ್ಲಿ ಗುರುತಿಸಿಕೊಂಡವರು’ ಎಂದು ಆರೋಪಿಸಿದರು.
‘ಕೆಲವೇ ಕೆಲವು ಮಠಾಧೀಶರ ಮಾತು ಕೇಳಿ ಲಿಂಗಾಯತಕ್ಕೆ ಮಾನ್ಯತೆ ಕೊಟ್ಟರೆ, ಮುಂಬರುವ ದಿನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೆಟ್ಟು ಬೀಳಲಿದೆ. ಹಾಗಾಗಿ ಸರ್ಕಾರ ನ್ಯಾಯಸಮ್ಮತ ತೀರ್ಮಾನ ತೆಗೆದುಕೊಳ್ಳಬೇಕು. ಆಗ ಎಲ್ಲರಿಗೂ ಸಂತಸವಾಗಲಿದೆ’ ಎಂದು ಹೇಳಿದರು.
‘ನಮ್ಮ ಧರ್ಮಯುದ್ಧ ವೈಯಕ್ತಿಕ ಅಲ್ಲ. ಧರ್ಮ ವಿರೋಧಿಗಳ ಮೇಲೆ ಮಾತ್ರ’ ಎಂದು ಅವರು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.