ADVERTISEMENT

ಲಿಂಗಾಯತ ಮಠಾಧೀಶರು ಮುಖಂಡರ ಮನವೊಲಿಸಿ

ಸ್ವತಂತ್ರ ಧರ್ಮದ ಬೇಡಿಕೆ: ಮೋಹನ್ ಭಾಗವತ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2017, 19:30 IST
Last Updated 19 ಆಗಸ್ಟ್ 2017, 19:30 IST
ಹುಬ್ಬಳ್ಳಿಯ ಆರ್‌ಎಸ್‌ಎಸ್‌ ಕಚೇರಿ ‘ಕೇಶವ ಕುಂಜ’ದಲ್ಲಿ ಶನಿವಾರ ನಡೆದ ಸಂಘದ ಉತ್ತರ ಮತ್ತು ದಕ್ಷಿಣ ಪ್ರಾಂತ ಬೈಠಕ್‌ ಮುಗಿಸಿ ಹೊರಬಂದ ಮೋಹನ್‌ ಭಾಗವತ್‌
ಹುಬ್ಬಳ್ಳಿಯ ಆರ್‌ಎಸ್‌ಎಸ್‌ ಕಚೇರಿ ‘ಕೇಶವ ಕುಂಜ’ದಲ್ಲಿ ಶನಿವಾರ ನಡೆದ ಸಂಘದ ಉತ್ತರ ಮತ್ತು ದಕ್ಷಿಣ ಪ್ರಾಂತ ಬೈಠಕ್‌ ಮುಗಿಸಿ ಹೊರಬಂದ ಮೋಹನ್‌ ಭಾಗವತ್‌   

ಹುಬ್ಬಳ್ಳಿ: ಸ್ವತಂತ್ರ ಧರ್ಮದ ಬೇಡಿಕೆಯಿಂದ ಹಿಂದೆ ಸರಿಯುವಂತೆ ಲಿಂಗಾಯತ ಮಠಾಧೀಶರು ಹಾಗೂ ಮುಖಂಡರನ್ನು ಮನವೊಲಿಸುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಸಂಘದ ಪ್ರಮುಖರಿಗೆ ಸೂಚನೆ ನೀಡಿದ್ದಾರೆ.

ಇಲ್ಲಿ ಶನಿವಾರ ನಡೆದ ಉತ್ತರ ಮತ್ತು ದಕ್ಷಿಣ ಕರ್ನಾಟಕ ಪ್ರಾಂತ ಬೈಠಕ್‌ನಲ್ಲಿ, ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ವೀರಶೈವರು ಮತ್ತು ಲಿಂಗಾಯತರ ನಡುವೆ ಸಹಮತ ಮೂಡಿಸಬೇಕು. ಅವರಿಬ್ಬರೂ ಒಗ್ಗಟ್ಟಿನಿಂದ ಇರುವ ಹಾಗೆ ನೋಡಿಕೊಳ್ಳಬೇಕು. ಇದು ರಾಜಕೀಯ ಹಾಗೂ ಧಾರ್ಮಿಕವಾಗಿಯೂ ಪ್ರಮುಖವಾದ ಕೆಲಸ ಎಂದು ಅವರು ಸಲಹೆ ನೀಡಿದರು ಎನ್ನಲಾಗಿದೆ.

ದಲಿತರು, ಹಿಂದುಳಿದವರ ಕಲ್ಯಾಣ ಕಾರ್ಯಕ್ರಮಕ್ಕೆ ಸಂಘದ ಕಾರ್ಯಕರ್ತರು ಹೆಚ್ಚಿನ ಒತ್ತು ನೀಡುವಂತೆ ಹಾಗೂ ಈ ಸಮುದಾಯಗಳಿಗೆ ಅನ್ಯಾಯವಾದರೆ ತಕ್ಷಣ ಸ್ಪಂದಿಸುವಂತೆಯೂ ಅವರು ಸೂಚಿಸಿದರು. ಬೈಠಕ್‌ನಲ್ಲಿ ಪಾಲ್ಗೊಂಡಿದ್ದ ಕಲ್ಲಡ್ಕ ಪ್ರಭಾಕರ ಭಟ್‌, ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ನಡೆದ ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರ ಕೊಲೆ ಪ್ರಕರಣ ಕುರಿತು ಭಾಗವತ್‌ ಅವರ ಗಮನ ಸೆಳೆದರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.