ಜಮಖಂಡಿ (ಬಾಗಲಕೋಟೆ ಜಿಲ್ಲೆ): ಹನ್ನೊಂದು ವರ್ಷದ ವಿದ್ಯಾರ್ಥಿಯನ್ನು ಕೊಲೆಗೈದ ಆರೋಪ ಸಾಬೀತಾಗಿದ್ದರಿಂದ, ಶಿಕ್ಷಕರಿಬ್ಬರಿಗೆ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಮುಧೋಳ ಹೌಸಿಂಗ್ ಕಾಲೊನಿಯ ಶಾಂತಿನಿಕೇತನ ಕೋಚಿಂಗ್ ಸೆಂಟರ್ನ ರೂಪಾ ಮಲ್ಲೇಶ ತೆಗ್ಗಿ ಹಾಗೂ ಮಹಾಲಿಂಗಪುರದ ಪ್ರಗತಿ ಶಾಲೆಯ ಶಿಕ್ಷಕ ಸಂಜು ಬಬಲೇಶ್ವರ ಶಿಕ್ಷೆಗೀಡಾದವರು.
ಸಾಕ್ಷ್ಯ ನಾಶಪಡಿಸಿದ ರೂಪಾ ಅವರ ಪತಿ ಮಲ್ಲೇಶ ತೆಗ್ಗಿ ಸೇರಿದಂತೆ ಮೂವರಿಗೂ ಏಳು ವರ್ಷ ಶಿಕ್ಷೆ ಹಾಗೂ ₹ 1 ಲಕ್ಷ ದಂಡ ವಿಧಿಸಲಾಗಿದೆ.
ತಮ್ಮ ನಡುವಿನ ಅನೈತಿಕ ಸಂಬಂಧವನ್ನು ಕಂಡಿದ್ದ ವಿದ್ಯಾರ್ಥಿ ಪ್ರಮೋದ ಪ್ರಭಾಕರ ಯಡಣ್ಣವರ, ಈ ವಿಷಯವನ್ನು ಮನೆಯವರಿಗೆ ತಿಳಿಸಬಹುದು ಎಂಬ ಭಯದಲ್ಲಿ, ಶಿಕ್ಷಕರಿಬ್ಬರೂ ಸೇರಿ 2015ರ ಫೆ.19ರಂದು ಬಾಲಕನನ್ನು ಜೋರಾಗಿ ಗೋಡೆಗೆ ತಳ್ಳಿ ಕೊಲೆ ಮಾಡಿದ್ದರು. ನಂತರ ಶವವನ್ನು, ನೇಣು ಹಾಕಿಕೊಂಡ ಸ್ಥಿತಿಯಲ್ಲಿರುವಂತೆ ಪ್ಲಾಸ್ಟಿಕ್ ಹಗ್ಗದಿಂದ ನೇತುಹಾಕಿದ್ದರು. ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ದುರುದ್ದೇಶದಿಂದ ರೂಪಾ ಅವರ ಪತಿ ಮಲ್ಲೇಶ ತೆಗ್ಗಿ, ವಿದ್ಯಾರ್ಥಿಯ ಶವವನ್ನು ಕೆಳಗೆ ಇಳಿಸಿ ಸಾಕ್ಷ್ಯ ನಾಶಪಡಿಸಿದ್ದರು.
ಈ ಕುರಿತು ಬಾಲಕನ ತಾಯಿ ರೇಖಾ ಯಡಣ್ಣವರ ದೂರು ನೀಡಿದ್ದರು. ಮುಧೋಳ ಪೊಲೀಸ್ ಠಾಣೆಯ ಪಿಎಸ್ಐ ಡಿ.ಕೆ. ಪಾಟೀಲ ಪ್ರಕರಣ ದಾಖಲಿಸಿಕೊಂಡಿದ್ದರು. ಸಿಪಿಐ ಎಸ್.ಬಿ. ಗಿರೀಶ ತನಿಖೆ ನಡೆಸಿ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸರ್ಕಾರಿ ಅಭಿಯೋಜಕ ವಿ.ಜಿ. ಹೆಬಸೂರ ವಕಾಲತ್ತು ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.