ಬಾಗಲಕೋಟೆ: ಬಾದಾಮಿಯ ಬನಶಂಕರಿ ದೇವಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಮ್ಮಿಶ್ರ ಸರ್ಕಾರದಲ್ಲಿ ತಮ್ಮನ್ನು ಹಾಗೂ ಬೆಂಬಲಿಗರ ಕಡೆಗಣನೆ ಮಾಡಿಲ್ಲ’ ಎಂದು ಹೇಳಿದರು.
’ಸಂಪುಟದಲ್ಲಿ ತಮ್ಮ ಆಪ್ತರು ಇಲ್ಲ ಎನ್ನುವುದಕ್ಕಿಂತ ಸದ್ಯ ಮಂತ್ರಿ ಆದವರು ತಮ್ಮ ಪರಮಾಪ್ತರಲ್ಲೇ ಪರಮಾಪ್ತರು. ಪಕ್ಷ, ಸರ್ಕಾರ ಎಂದು ಹೇಳಿ ಅಧಿಕಾರ ಮಾಡಬೇಕೆ ಹೊರತು ಆಪ್ತರು, ಪರಮಾಪ್ತರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಲ್ಲ’ ಎಂದರು.
ಖಾಲಿ ಇರುವ ಆರು ಸ್ಥಾನಗಳನ್ನು ಪ್ರಾದೇಶಿಕತೆ, ಜಾತಿ ಹಾಗೂ ಸಾಮಾಜಿಕ ನ್ಯಾಯದ ಮೇಲೆ ಹಂಚಿಕೆ ಮಾಡಲಾಗುವುದು ಎಂದರು.
ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಶರಣಾಗಿಲ್ಲ. ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ಜೆಡಿಎಸ್ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿದ್ದೇವೆ ಎಂದರು.
ಬಾದಾಮಿಯಲ್ಲಿ ಗೆದ್ದ ಬಳಿಕ ಮೊದಲ ಭಾರಿಗೆ ಕ್ಷೇತ್ರಕ್ಕೆ ಆಗಮಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಐದು ವರ್ಷಗಳ ಅವಧಿಯಲ್ಲಿ ಬಾದಾಮಿ ಸಮಗ್ರ ಅಭಿವೃದ್ಧಿ ಪಡಿಸುತ್ತೇನೆ ಎಂದು ಅಭಯ ನೀಡಿದರು.
ರೈತ ಕುಟುಂಬಕ್ಕೆ ಸಾಂತ್ವನ
ಬಾದಾಮಿ ತಾಲ್ಲೂಕಿನ ಜಮ್ಮನಕಟ್ಟಿಯಲ್ಲಿ ಮೇ 25ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ರಾಜಪ್ಪ ಜಲಗೇರಿ ನಿವಾಸಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ವೇಳೆ ಸರ್ಕಾರದ ಪರವಾಗಿ ₹ 5 ಲಕ್ಷ ಹಾಗೂ ವೈಯಕ್ತಿಕವಾಗಿ ₹ 1 ಲಕ್ಷ ಮೊತ್ತದ ಚೆಕ್ ಅನ್ನು ವಿತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.