ಬೆಂಗಳೂರು: ‘ಮಹದಾಯಿ ಜಲ ವಿವಾದ ವಿಷಯದಲ್ಲಿ ನಾವು ಕಾನೂನು ಉಲ್ಲಂಘಿಸಿಲ್ಲ. ನೀರು ಸೋರುತ್ತಿರುವ ಕುರಿತು ನ್ಯಾಯಮಂಡಳಿಯ ಗಮನಕ್ಕೆ ತಂದಿದ್ದೇವೆ ಅಷ್ಟೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸಮರ್ಥನೆ ನೀಡಿದರು.
ಮಹದಾಯಿ ನದಿ ನೀರನ್ನು ಮಲಪ್ರಭಾ ನದಿಗೆ ಕರ್ನಾಟಕ ರಾಜ್ಯ ತಿರುಗಿಸಿಕೊಂಡಿದೆ ಎಂದು ಗೋವಾ ಸರ್ಕಾರ ಆಕ್ಷೇಪಿಸಿದ ಕುರಿತು ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಸಚಿವರು, ‘ನೀರು ಸೋರಿಕೆ ಕುರಿತು ಫೋಟೋ ಸಹಿತ ನ್ಯಾಯಮಂಡಳಿಗೆ ದಾಖಲೆಗಳನ್ನು ಒದಗಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
‘ಮಹದಾಯಿ ನ್ಯಾಯಮಂಡಳಿ ಆಗಸ್ಟ್ 20ರ ಒಳಗೆ ತೀರ್ಪು ನೀಡುವ ನಿರೀಕ್ಷೆ ಇದೆ. ಈ ವಿಷಯದಲ್ಲಿ ಆತ್ಮ ವಿಶ್ವಾಸದಿಂದ ಇರುವಂತೆ ನಮ್ಮ ವಕೀಲರು ಹೇಳಿದ್ದಾರೆ. ಹೀಗಾಗಿ, ಈ ತೀರ್ಪಿಗೆ ಉಸಿರು ಬಿಗಿ ಹಿಡಿದು ಕಾಯುತ್ತಿದ್ದೇವೆ’ ಎಂದರು.
‘ಗೋವಾದವರು ಕೂಡ ಆ ನೀರನ್ನು ಬಳಸಿಕೊಳ್ಳಲಿ. ನಮ್ಮ ರಾಜ್ಯಕ್ಕೆ ಎಷ್ಟು ನೀರು ಸಿಗಬೇಕೋ ಅಷ್ಟು ಸಿಗ ಬೇಕೆಂಬುದಷ್ಟೆ ನಮ್ಮ ಬೇಡಿಕೆ. ಉತ್ತರ ಕರ್ನಾಟಕದ ಭಾಗದ ಜನರಿಗೆ ನೀರು ಅಗತ್ಯವಾಗಿದೆ. ಬೇಕಿದ್ದರೆ ಗೋವಾ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಲಿ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.