ADVERTISEMENT

‘ಕಾಶ್ಮೀರ–ಪ್ಯಾಲೆಸ್ಟೀನ್‌ ಸಮಸ್ಯೆ ಇತ್ಯರ್ಥಪಡಿಸಿ’

ಪಿಟಿಐ
Published 20 ಮೇ 2018, 19:35 IST
Last Updated 20 ಮೇ 2018, 19:35 IST
ಮಲಿಹಾ
ಮಲಿಹಾ   

ವಿಶ್ವಸಂಸ್ಥೆ : ಬಹುಕಾಲದಿಂದ ಪರಿಹಾರವಾಗದೇ ಉಳಿದಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಪ್ಯಾಲೆಸ್ಟೀನ್‌ ವಿವಾದದಂತಹ ಸಮಸ್ಯೆಗಳಿಗೆ ಸಂಬಂಧಿಸಿ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ಕಾಯ್ದಿರಿಸಿಕೊಂಡಿರುವ ‘ಆಯ್ಕೆ’ಗಳನ್ನು ಕಡ್ಡಾಯವಾಗಿ ಕೊನೆಗಾಣಿಸಬೇಕು ಎಂದು ಪಾಕಿಸ್ತಾನವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಒತ್ತಾಯಿಸಿದೆ.

ಭದ್ರತಾ ಮಂಡಳಿ ಸಭೆಯಲ್ಲಿ ‘ವಿಶ್ವಶಾಂತಿ ಮತ್ತು ಭದ್ರತೆಗೆ ಅಂತರಾಷ್ಟ್ರೀಯ ಕಾನೂನು ಎತ್ತಿ ಹಿಡಿಯುವುದು’ ಕುರಿತು ಇತ್ತೀಚೆಗೆ ನಡೆದ ಚರ್ಚೆಯಲ್ಲಿ ವಿಶ್ವಸಂಸ್ಥೆಯಲ್ಲಿನ ಪಾಕ್‌ ರಾಯಭಾರಿ ಮಲಿಹಾ ಲೋಧಿ ಮಾತನಾಡಿದರು.

ಲೋಧಿ ಮತ್ತು ಪಾಕಿಸ್ತಾನದ ನಿಯೋಗವು ವಿಶ್ವಸಂಸ್ಥೆಯ ವಿವಿಧ ವೇದಿಕೆಗಳಲ್ಲಿ ಕಾಶ್ಮೀರ ವಿವಾದವನ್ನು ಬಗೆಹರಿಸಲು ಸತತವಾಗಿ ಪ್ರಸ್ತಾಪಿಸು ತ್ತಲೇ ಇದೆ.

ADVERTISEMENT

ಈ ತಿಂಗಳ ಆರಂಭದಲ್ಲಿ ನಡೆದ ಮಾಹಿತಿ ಸಮಿತಿಯ ಅಧಿವೇಶನ ದಲ್ಲಿ ಪಾಕಿಸ್ತಾನದ ನಿಯೋಗದ ಪ್ರತಿನಿಧಿ ಮಸೂದ್ ಅನ್ವರ್, ‘ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ’ ಎಂದು ಹೇಳುವ ಮೂಲಕ ಕಾಶ್ಮೀರ ವಿವಾದ ಕೆದಕಿದ್ದರು.

ಅನ್ವರ್ ಹೇಳಿಕೆಯನ್ನು ಭಾರತ ಬಲವಾಗಿ ತಿರಸ್ಕರಿಸಿದ್ದು, ‘ಸಮಿತಿಯ ಕೆಲಸ ಕಾರ್ಯಗಳಿಗೆ ಅವರ ಟೀಕೆಗಳು ಅಪ್ರಸ್ತುತವಾಗಿವೆ’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತೀಯ ಮಿಷನ್‌ ಸಚಿವ ಎಸ್.ಶ್ರೀನಿವಾಸ್ ಪ್ರಸಾದ್ ಅವರು ಟೀಕಿಸಿದ್ದಾರೆ.

‘ವಿವಾದಾಸ್ಪದ ಸಮಸ್ಯೆಗಳನ್ನು ಉಲ್ಲೇಖಿಸಿ ಅದನ್ನು ಸಮಿತಿಯ ಕಾರ್ಯಸೂಚಿಗೆ ಸೇರಿಸಲು ಮಾಡುತ್ತಿರುವ ಮತ್ತೊಂದು ಪ್ರಯತ್ನವಿದು. ಸಮಿತಿಯ ಕೆಲಸಕ್ಕೆ ಅಪ್ರಸ್ತುತವಾಗಿರುವ ಇಂತಹ ಪ್ರತಿಕ್ರಿಯೆಗಳನ್ನು ಸಂಪೂರ್ಣ ತಿರಸ್ಕರಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.