ಬೀಜಿಂಗ್: ಟಿಬೆಟಿಯನ್ನರ ಧರ್ಮಗುರು ದಲೈಲಾಮಾ ಅವರು ಅರುಣಾಚಲಪ್ರದೇಶಕ್ಕೆ ಭೇಟಿ ನೀಡಿರುವುದು ಉಭಯ ದೇಶಗಳ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಚೀನಾ ಪ್ರತಿಪಾದಿಸಿದೆ.
ಚೀನಾದ ಹಿತಾಸಕ್ತಿಯನ್ನು ದುರ್ಬಲಗೊಳಿಸಲು ದಲೈಲಾಮಾ ಅವರನ್ನು ದಾಳವಾಗಿ ಬಳಸಿಕೊಳ್ಳದಂತೆ ಚೀನಾ ಭಾರತಕ್ಕೆ ಎಚ್ಚರಿಕೆ ನೀಡಿದೆ.
ದಲೈಲಾಮಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದರಿಂದ ಗಡಿ ಸಮಸ್ಯೆಯು ಮತ್ತಷ್ಟು ಜಟಿಲಗೊಂಡಿದೆ ಎಂದು ಅಭಿಪ್ರಾಯಪಟ್ಟಿದೆ.
‘ಈ ಹಿಂದೆ ಕೆಲ ಕಾರಣಗಳಿಂದಾಗಿ ಭಾರತ ಹಾಗೂ ಚೀನಾದ ರಾಜಕೀಯ ಸಂಬಂಧ ಶಿಥಿಲವಾಗಿತ್ತು. ಈಗ ದಲೈಲಾಮ ಅವರ ಭೇಟಿಯು ಚೀನಾ– ಭಾರತದ ಸಂಬಂಧ ಹಾಗೂ ಗಡಿ ಕುರಿತಾದ ಮಾತುಕತೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ’ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್ ತಿಳಿಸಿದ್ದಾರೆ.
‘ಟಿಬೆಟ್ ಬಗ್ಗೆ ತನ್ನ ಬದ್ಧತೆ ಹಾಗೂ ಚೀನಾದ ಹಿತಾಸಕ್ತಿಗಾಗಿ ದಲೈಲಾಮಾ ಹೆಸರು ಬಳಕೆ ಮಾಡದಂತೆ ಚೀನಾದ ಅಭಿಪ್ರಾಯವನ್ನು ಅನುಮೋದಿಸುವಂತೆ ಭಾರತವನ್ನು ಒತ್ತಾಯಿಸಿದ್ದೇವೆ’ ಎಂದು ಲು ಹೇಳಿದ್ದಾರೆ.
‘ಈ ರೀತಿಯ ಮಾರ್ಗದಿಂದ ಮಾತ್ರ ಗಡಿ ಸಮಸ್ಯೆ ಪರಿಹಾರಕ್ಕೆ ಉತ್ತಮ ವಾತಾವರಣ ಸೃಷ್ಟಿಸಲು ಸಾಧ್ಯ’ ಎಂದು ಅವರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಯತ್ನ: ಚೀನಾದ ಆಡಳಿತ ನೀತಿಯನ್ನು ವಿರೋಧಿಸಿ ಟಿಬೆಟ್ನ ಬೌದ್ಧ ಸನ್ಯಾಸಿಯೊಬ್ಬರು ಶನಿವಾರ ಸಾರ್ವಜನಿಕ ಸ್ಥಳದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.